ಮಂಡ್ಯ: ಯುವಕರು ಸ್ವಾಮಿ ವಿವೇಕಾನಂದರ ಚಿಂತನೆ ಹಾಗೂ ಆದರ್ಶಗಳನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳುವಂತೆ ಎಂದು ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್-ನೆಹರು ಯುವ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ‘ರಾಷ್ಟ್ರೀಯ ಯುವ ದಿನಾಚರಣೆʼಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದಂದು ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರು ಪಾಲ್ಗೊಂಡಿರುವುದು ಸಂತೋಷದ ವಿಷಯ ಎಂದರು .
ಯುವಜನತೆ ರಾಮಕೃಷ್ಣ ಆಶ್ರಮಕ್ಕೆ ತಿಂಗಳಿಗೊಮ್ಮೆ ಅಥವಾ ವಾರಕ್ಕೊಮ್ಮೆ ಆದರೂ ಭೇಟಿ ನೀಡಿ, ಗುರುಗಳೊಂದಿಗೆ ಸಂವಾದ ನಡೆಸಿ ಜ್ಞಾನ ವೃದ್ಧಿಸಿಕೊಳ್ಳಿ, ಜೀವನದಲ್ಲಿ ಶ್ರದ್ಧೆ, ಭಕ್ತಿ, ಶಿಸ್ತು, ಪ್ರೀತಿಯನ್ನು ಅನುಸರಿಸಿದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಹೇಳಿದರು.
ರಾಮಕೃಷ್ಣ ಆಶ್ರಮದ ಮಂಜು ಮಹಾರಾಜ್ ಸ್ವಾಮಿ ಮಾತನಾಡಿ, ವಿವೇಕಾನಂದರ ಸಂದೇಶಗಳನ್ನು ನಿರ್ಲಕ್ಷಿಸಿದರೆ ಮುಂದೊಂದು ದಿನ ದೊಡ್ಡಬೆಲೆ ತೆರಬೇಕಾಗುತ್ತದೆ. ವಿವೇಕಾನಂದರ ಕನಸು ನನಸಾಗಬೇಕಾದರೆ ಯುವ ಜನತೆ ಎಚ್ಚೆತ್ತುಕೊಳ್ಳಬೇಕು, ಯುವ ಜನತೆ ದಿನದಲ್ಲಿ ಕೆಲವು ನಿಮಿಷಗಳಾದರೂ ವಿವೇಕಾನಂದರ ವಿಚಾರಗಳು ಅಧ್ಯಯನ ಮಾಡುವುದರೊಂದಿಗೆ ಅನುಸರಿಸಿ, ದೇಶದ ಭವಿಷ್ಯ ಉಜ್ವಲವಾಗುವಂತೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಗಣ್ಯರಾದ ಬಿ.ಎಸ್ ಅನುಪಮ, ಜಿ ಪ್ರಕಾಶ್, ಅನಿಲ್ ಕುಮಾರ್, ಕುಮಾರ್ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.





