Mysore
21
scattered clouds

Social Media

ಗುರುವಾರ, 05 ಫೆಬ್ರವರಿ 2026
Light
Dark

ಕೆರೆ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಾಕೀತು

District Collector instructs official

ಮಂಡ್ಯ : ಪ್ರತಿ ಮಾಹೆ ಜಿಲ್ಲೆಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸಿರುವ ಬಗ್ಗೆ ಸರ್ಕಾರಕ್ಕೆ ಟಿ.ಎಲ್.ಸಿ ವರದಿಯನ್ನು ಕಳುಹಿಸಬೇಕಾಗಿದೆ. ಆದರೆ, ಅಧಿಕಾರಿಗಳು ಇದುವರೆಗೂ ಒತ್ತುವರಿ ತೆರವುಗೊಳಿಸದೆ ಇರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಎಚ್ಚರಿಕೆ ನೀಡಿದರು.

ಅವರು‌ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸುವ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಹೆಚ್‌ಎಲ್.ಬಿ‌.ಸಿ, ಕಾ.ನೀ.ನಿ.ನಿ, ಜಿಲ್ಲಾ ಪಂಚಾಯತ್ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಒಟ್ಟು 962 ಕೆರೆಗಳಿದ್ದು ಇದರಲ್ಲಿ 448 ಕೆರೆಗಳು ಒತ್ತುವರಿಯಾಗಿರುತ್ತದೆ ಎಂದರು.

ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ವತಿಯಿಂದ ಕೆರೆಗಳ ಸುತ್ತಳತೆಯನ್ನು ಅಳತೆ ಮಾಡಿ ಕೊಡಲಾಗಿದೆ. ಒತ್ತುವರಿಯನ್ನು ಆಯಾ ಇಲಾಖೆ ಅಧಿಕಾರಿಗಳಿಗೆ ಒತ್ತುವರಿ ತರವುಗೊಳಿಸಿ ವರದಿ ನೀಡುವಂತೆ ತಿಳಿಸಲಾಗಿತ್ತು. 448 ಕೆರೆಗಳಲ್ಲಿ 245 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. 203 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವುದು ಬಾಕಿ ಇರುತ್ತದೆ ಎಂದರು.

ಪ್ರತಿ ಮಾಹೆ ಕೆರೆ ಒತ್ತುವರಿ ತೆರವುಗೊಳಿಸಿರುವ ಬಗ್ಗೆ ಅಧಿಕಾರಿಗಳು ಜಿ.ಪಿ.ಎಸ್ ಛಾಯಚಿತ್ರದೊಂದಿಗೆ ವರದಿ ನೀಡಬೇಕಿದ್ದು, ಕಳೆದ ಎರಡು ತಿಂಗಳಿಂದ ಅಧಿಕಾರಿಗಳು ವರದಿಯನ್ನು ನೀಡಿರುವುದಿಲ್ಲ. ಮುಂದಿನ ಸಭೆಯೊಳಗೆ ಕೆರೆಗಳ ಒತ್ತುವರಿ ತೆರವುಗೊಳಿಸಿ ಪೂರಕ ಮಾಹಿತಿ ನೀಡದಿದ್ದಲ್ಲಿ, ಭೂ ಕಬಳಿಕೆ ಅಧಿನಿಯಮ 2011 ರಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಎಲ್ಲಾ ಕೆರಗಳನ್ನು ಸರ್ವೆ ಮಾಡಿ ಅದರ ಸುತ್ತಳತೆಯನ್ನು ಗುರುತಿಸಿಕೊಡಲಾಗಿದೆ. ಒತ್ತುವರಿಯನ್ನು ತೆರವುಗೊಳಿಸುವುದರ ಜೊತೆಗೆ ಅದು ಪುನ: ಒತ್ತುವರಿಯಾಗದಂತೆ ನೋಡಿಕೊಂಡು ಸಂರಕ್ಷಿಸಬೇಕು ಎಂದರು.

ಕೆರೆಗಳು ಹಾಗೂ ನೀರಿನ ಮೂಲಗಳಲ್ಲಿ ಘನ ತ್ಯಾಜ್ಯ ವಸ್ತುಗಳನ್ನು ವಿಸರ್ಜನೆ ಮಾಡುವುದು ಅಪರಾಧವಾಗಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಪಲಕಗಳನ್ನು ಕೆರೆಯ ಸುತ್ತ‌ ಅಳವಡಿಸಿ . ಕೆರೆ ಒತ್ತುವರಿ, ಘನ ತ್ಯಜ್ಯ ಹಾಕುವುದು ಅಥವಾ ಕೆರೆಗಳ ರಕ್ಷಣೆಗೆ ಸಂಬಂಧಿಸಿದಂತೆ ದೂರು ನೀಡಲು ದೂರು ಪರಿಹಾರ ಕೋಶ ತೆರೆದು ವರದಿ ನೀಡುವಂತೆ ತಿಳಿಸಿದರು.

ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದಲ್ಲಿ ಕೆರೆಗಳಿಗೆ ಸಂಬಂಧಿಸಿದಂತೆ 2010 ರಿಂದ 2024 ರವರೆಗೆ ಮಂಡ್ಯ ತಾಲ್ಲೂಕು-19, ಮದ್ದೂರು-25, ನಾಗಮಂಗಲ-90, ಮಳವಳ್ಳಿ -05, ಶ್ರೀರಂಗಪಟ್ಟಣ-15, ಕೆ.ಆರ್.ಪೇಟೆ-04 ಒಟ್ಟು 158 ಪ್ರಕರಣಗಳು ದಾಖಲಾಗಿರುತ್ತದೆ. ಅವುಗಳನ್ನು ವಿಲೇವಾರಿ ಮಾಡಿ ಎಂದರು.

ಕೆರೆಗಳ ನೀರನ್ನು ಜಾನುವಾರುಗಳು ಸೇವಿಸುತ್ತವೆ .ನೀರು ಜಾನುವಾರುಗಳು ಕುಡಿಯಲು ಯೋಗ್ಯ ವಾಗಿದೆಯೇ ಎಂಬುದನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಗುಣಮಟ್ಟದ ಪರೀಕ್ಷೆಗೆ ಒಳಪಡಿಸಿ ವರದಿ ಸಲ್ಲಿಸಿ. ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಲ್ಲಿ ನೀರಿನ ಪರೀಕ್ಷೆಗೆ ಅವಕಾಶವಿದ್ದು, ಇದಕ್ಕೆ ರೂ 625/- ಶುಲ್ಕ ವಿಧಿಸಲಾಗುವುದು ಎಂದರು.

ನರೇಗಾ ಯೋಜನೆಯಡಿ ಸಣ್ಣ ಕೆರೆಗಳ ಸುತ್ತ‌ ಹಸಿರು ಗಿಡಗಳನ್ನು ನೆಟ್ಟಿ ಕೆರೆ ಒತ್ತುವರಿಯಾಗದಂತೆ ಸಂರಕ್ಷಿಸಲು ಅವಕಾಶವಿದೆ ಬಳಸಿಕೊಳ್ಳಿ. ಇದಲ್ಲದೇ ಸಿ.ಎಸ್.ಆರ್ ಅನುದಾನ ಬಳಸಿಕೊಂಡು ತಾಲ್ಲೂಕಿನಲ್ಲಿ ಒಂದೊಂದು ಕೆರೆಯ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡಬಹುದು. ಈ ಹಿನ್ನಲೆಯಲ್ಲಿ ಕೆರೆಗಳ ಹೆಸರನ್ನು ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿ.ಡಿ.ಎಲ್ ಆರ್ ಉಪನಿರ್ದೇಶಕ ವಿರೂಪಾಕ್ಷ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!