ಪಿಡಿಒಗಳ ಕುಂದುಕೊರತೆ ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಸಲಹೆ
ಮಂಡ್ಯ: ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿ.ಡಿ.ಒ.ಗಳು ಯಾವುದೇ ದೂರುಗಳು ಬರದಂತೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ ಗುರುತಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ಹೇಳಿದರು.
ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪಿ.ಡಿ.ಒ.ಗಳ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಡುವ ಕೆಲಸದ ಬಗ್ಗೆ ಆತ್ಮತೃಪ್ತಿ ಇರಬೇಕು. ಕೆಲವು ಪಿ.ಡಿ.ಒ.ಗಳು ಜಿಲ್ಲೆಯಲ್ಲಿ ಉತ್ತಮ, ಕೆಲಸ ಮಾಡುತ್ತಿದ್ದು, ಅವರ ಅರ್ಹತೆ ಮತ್ತು ಸಾಮರ್ಥ್ಯವನ್ನು ಗುರುತಿಸಲಾಗಿದೆ. ೬ ತಿಂಗಳಿಗೆ ಒಂದು ಬಾರಿ ಪಿ.ಡಿ.ಒ.ಗಳ ಆರೋಗ್ಯ ತಪಾಸಣೆ ಮತ್ತು ಕುಟುಂಬದವರ ಸಮ್ಮುಖದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದಕ್ಕೆ ಪ್ರಶಸ್ತಿ ನೀಡಲಾಗುವುದು ಎಂದರು.
ಮಕ್ಕಳ ಬೇಸಿಗೆ ಶಿಬಿರದಲ್ಲಿ ೧೭,೫೦೦ ಮಕ್ಕಳ ನೋಂದಣಿ:
ಜಿಲ್ಲೆಯಲ್ಲಿನ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಶಿಸ್ತು ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಸಾರ್ವಜನಿಕರ ಕೆಲಸವನ್ನು ಉತ್ತಮವಾಗಿ ನಿರ್ವಹಿಸಬಹುದು. ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬರದಲ್ಲಿ ೧೭,೫೦೦ ಮಕ್ಕಳನ್ನು ನೋಂದಣಿ ಮಾಡಿಸಿರುವುದು ಇದಕ್ಕೆ ಸಾಕ್ಷಿ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಸಿಬ್ಬಂದಿ ಗ್ರಾಮ ಪಂಚಾಯಿತಿ ಆಡಳಿತದಲ್ಲಿನ ಕುಂದುಕೊರತೆಗಳ ಬಗ್ಗೆ ನಿರ್ಭಯವಾಗಿ ಮತ್ತು ಮುಕ್ತವಾಗಿ ಹೇಳಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಮಾಹಿತಿ ನೀಡುವಂತೆ ತಿಳಿಸಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ತಿಂಗಳಲ್ಲಿ ಒಂದು ಬಾರಿ ಪಿ.ಡಿ.ಒ. ಕುಂದುಕೊರತೆ ಬಗ್ಗೆ ೨-೩ ಗಂಟೆ ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಕ್ರಮವಹಿಸಬೇಕು. ಪಿ.ಡಿ.ಒ.ಗಳನ್ನು ವೈಯಕ್ತಿಕವಾಗಿ ಗುರಿಯನ್ನಿಟ್ಟುಕೊಂಡು ಜನರಿಂದ ದೂರುಗಳು ಬಂದಲ್ಲಿ ತಾಲ್ಲೂಕು ಸಂಘದವರು ಬಗೆಹರಿಸಲು ಕ್ರಮವಹಿಸಬೇಕು. ಬಗೆಹರಿಸಲು ಸಾಧ್ಯವಾಗದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಬಗೆಹರಿಸಬೇಕು ಎಂದರು.
ಗ್ರಾ.ಪಂ.ಗಳಲ್ಲಿ ಕೆ.ಟಿ.ಪಿ.ಪಿ. ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿವೆ. ೬೦:೪೦ ಪರಿಪಾತದ ಪ್ರಕಾರ ಕ್ರಿಯಾ ಯೋಜನೆ ಮಾಡಬೇಕು. ಗ್ರಾ.ಪಂ. ಸಾಮಾನ್ಯ ಸಭೆ ನಡವಳಿಯಲ್ಲಿ ನಿಯಮಾನುಸಾರ ವೆಚ್ಚ ಮಾಡುವ ಬಗ್ಗೆ ಪಿ.ಡಿ.ಒ.ಗಳು ಕ್ರಮವಹಿಸಬೇಕು. ಕೆ.ಟಿ.ಪಿ.ಪಿ. ನಿಯಮ ಹಾಗೂ ಆರ್ಥಿಕ ಸಂಹಿತೆ ಪ್ರಕಾರ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಪ್ರಶಾಂತ್ ಬಾಬು ಮಾತನಾಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪಿ.ಡಿ.ಒ.ಗಳ. ಕಾರ್ಯನಿರ್ವಹಣಾ ವರದಿ, ಟೈಮ್ ಬೌಂಡ್ ಸೇರಿದಂತೆ ಅವರ ಪ್ರತಿ ದಿನದ ಕೆಲಸದ ನಿರ್ವಹಣೆಯಲ್ಲಿ ಇರುವ ತೊಂದರೆಗಳನ್ನು ಪರಿಹರಿಸಲು ಸಭೆ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಪ್ರತಿ ಮಾಹೆ ೫ನೇ ತಾರೀಖಿನೊಳಗೆ ವೇತನ ;
ಪಿ.ಡಿ.ಒ.ಗಳ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ತಾಲ್ಲೂಕಿನಲ್ಲಿ ಪ್ರತಿ ಮಾಹೆ ವೇತನ ಸರಿಯಾಗಿ ಆಗುತ್ತಿಲ್ಲ. ಪ್ರತಿ ಮಾಹೆ ೫ನೇ ತಾರೀಖಿನ ಒಳಗೆ ವೇತನ ಆಗಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಿ, ಬಾಬು, ಮುಖ್ಯ ಯೋಜನಾಧಿಕಾರಿ ಧನುಷ್, ತಾಪಂ ಇಒ ವೀಣಾ ಇತರರು ಭಾಗವಹಿಸಿದ್ದರು.





