ಮಂಡ್ಯ: ನಾಡ ಬಾಂಬ್ ಸ್ಫೋಟದಿಂದಾಗಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿಯಲ್ಲಿ ನಡೆದಿದೆ.
ವಿದ್ಯಾರ್ಥಿಗಳನ್ನು ಹರಿಯಂತ್ ಪಾಟೀಲ್ ಹಾಗೂ ಪಾರ್ಥ ಎಂದು ಗುರುತಿಸಲಾಗಿದ್ದು, ಜೈನ ಬಸದಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆಂಜನೇಯ ಬೆಟ್ಟದ ದೇವಸ್ಥಾನದ ಸುತ್ತ ಸ್ವಚ್ಛಕಾರ್ಯಕ್ಕಾಗಿ ವಿದ್ಯಾರ್ಥಿಗಳು ತೆರಳಿದ್ದರು. ಈ ವೇಳೆ ವಿದ್ಯಾರ್ಥಿಗಳು ಕಸದ ರಾಶಿಗೆ ಕೈ ಹಾಕಿದ್ದು, ಬಾಂಬ್ ಸ್ಪೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಓರ್ವನ ಅಂಗೈ ಸಂಪೂರ್ಣ ಛಿದ್ರವಾಗಿದ್ದು, ಇನ್ನೋರ್ವನ ಮುಖದ ಭಾಗಕ್ಕೆ ಗಾಯವಾಗಿದೆ.
ಕಾಡು ಹಂದಿ ಬೇಟೆಗಾಗಿ ನಾಡ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಕಿಡಿಗೇಡಿಗಳ ಕೆಲಸದಿಂದ ಅಮಾಯಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಬೆಳ್ಳೂರು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಬಿಂಡಿಗನವಿಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





