Mysore
21
clear sky

Social Media

ಬುಧವಾರ, 04 ಮಾರ್ಚ್ 2026
Light
Dark

ವಿಜೃಂಭಣೆಯಿಂದ ಜರುಗಿದ ಮಂಟೇಸ್ವಾಮಿ ಜಾತ್ರಾ ಮಹೋತ್ಸವ

ಕೆ.ಎಂ ದೊಡ್ಡಿ : ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಮದ್ದೂರು ತಾಲೂಕಿನ ಸುಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಠದ ಹೊನ್ನಾಯಕನಹಳ್ಳಿ ಗ್ರಾಮದ ಶ್ರೀ ಮಂಟೇಸ್ವಾಮಿ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.

ಕೆ.ಎಂ ದೊಡ್ಡಿ ಸಮೀಪದ ಮಠದ ಹೊನ್ನನಾಯಕನಹಳ್ಳಿಯಲ್ಲಿ ಮಂಟೇಸ್ವಾಮಿ ದೀಪಾವಳಿ ಜಾತ್ರಾ ಮಹೋತ್ಸವವು ಮಂಟೇಸ್ವಾಮಿ ಕಪ್ಪಡಿ ರಾಚಪ್ಪಾಜಿ ಮಠದ ಮಠಾಧೀಪತಿಗಳಾದ ವರ್ಚಸ್ವಿ ಸಿದ್ದಲಿಂಗರಾಜೇಅರಸ್ ಅವರ ದಿವ್ಯ ಸಾನಿಧ್ಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಸಾಂಪ್ರಾದಾಯಿಕವಾಗಿ ವಿಶ್ವಕರ್ಮ ಸಮುದಾಯದವರಿಂದ ನಡೆದ ದೀಪಾವಳಿ ಜಾತ್ರೆಯ ವಿಶೇಷವಾಗಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ಬಸಪ್ಪ ದೇವರಿಗೆ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ಮುಂಜಾನೆಯಿಂದಲೆ ಜರುಗಿತು. ಗ್ರಾಮದ ಹೊರವಲಯದಲ್ಲಿರುವ ದೊಡ್ಡ ಕೆರೆ ಸಮೀಪ ಮಂಟೇಸ್ವಾಮಿ ಬಸಪ್ಪ, ಕಂಡಾಯ, ಬಿರುದು ದೇರಿದಂತೆ ವಿವಿಧ ದೇವತೆಗಳ ಹೂವು ಹೊಂಬಾಳೆ ಕಾರ್ಯಕ್ರಮವು ಭಕ್ತಿ ಪ್ರಧಾನವಾಗಿ ನೆರವೇರಿಸಲಾಯಿತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಂಡಾಯ ಹಾಗೂ ಬಸವಪ್ಪ ಮೆರವಣಿಗೆ ರಾತ್ರಿಯಿಡಿ ನಡೆಯಿತು.

ಇದನ್ನು ಓದಿ: ಮಲೇಷ್ಯಾ ಆಸಿಯಾನ್ ಶೃಂಗ ಸಭೆ : ವರ್ಚುವಲ್ ಆಗಿ ಮೋದಿ ಭಾಗಿ

ದೇವಾಲಯದ ಇತಿಹಾಸ, ಮಂಟೇಸ್ವಾಮಿ ಹೆಸರು ನಾಮಕರಣಗೊಂಡ ಸ್ಥಳ:-
ಧರೆಗೆ ದೊಡ್ಡವರು ತಮ್ಮ ಶಿಷ್ಯರೊಡಗೂಡಿ ದಕ್ಷಿಣಾಭಿಮುಖವಾಗಿ ಆಗಮಿಸುವ ವೇಳೆ ಆದಿಹೊನ್ನಾಯಕನಹಳ್ಳಿಗೆ ಬರುತ್ತಾರೆ. ಅಲ್ಲಿ ತಮ್ಮ ಶಿಷ್ಯರನ್ನೆಲ್ಲ ಒಂದೆಡೆ ಬಿಟ್ಟು ಬಳೆ ಮುದ್ದಮ್ಮ ಎಂಬಾಕೆಯ ಮನೆಯ ಮುಂದೆ ಕೋರಣ್ಯದ ಭಿಕ್ಷಕ್ಕಾಗಿ ಬರುತ್ತಾರೆ. ಮುದ್ದಮ್ಮ ಹಟ್ಟಿಯಲ್ಲಿ ಆಗ ಹಾಲು ಕರೆಯುತ್ತಿರುತ್ತಾಳೆ. ಕಾಲಲ್ಲಿ ಜಂಗು, ಕೈಯಲ್ಲಿ ಕಂಡಾಯ ಹಿಡಿದು ಶಬ್ದ ಮಾಡಿಕೊಂಡು ಬಂದ ಧರೆಗೆ ದೊಡ್ಡವರನ್ನು ನೋಡಿ ಹಸು ಬೆದರಿ ಹಾಲಿನ ತಂಬಿಗೆಯನ್ನು ಒದೆಯುತ್ತದೆ. ಮುದ್ದಮ್ಮ ಸಿಟ್ಟಾಗಿ ಹಾಳಾದ ಮಂಟೋದಯ್ಯ ಮುಂದೆ ಹೋಗು ಎಂದು ನುಡಿಯುತ್ತಾಳೆ. ಹೆಸರಿಲ್ಲದ ನನಗೆ ಹೆಸರು ಕಟ್ಟಿದ್ದೀಯಾ ತಾಯಿ ಮುಂದೆ ಮಂಟೆಲಿಂಗಯ್ಯ ಎಂಬ ಹೆಸರು ನಾಮಕರಣವಾಗಲಿ ಎಂದು ಹೇಳಿ ಹೊನ್ನಾಯಕನಹಳ್ಳಿಯಲ್ಲಿ ಮುದ್ದಮ್ಮ ವಾಸವಿದ್ದ ಸ್ಥಳ ಇಂದು ಮಂಟೇಸ್ವಾಮಿ ಮಠವಾಗಿ ಸಾಂಪ್ರದಾಯಿಕವಾಗಿ ಮುಂದುವರೆಯುತ್ತಿದೆ.

ಗ್ರಾಮದಲ್ಲಿ ಆಕರ್ಷಕವಾದ ವಿದ್ಯುತ್‌ದೀಪಾಲಾಂಕಾರ
ದೀಪಾವಳಿ ಹಬ್ಬದ ಅಂಗವಾಗಿ ಹೊನ್ನಾಯಕನಹಳ್ಳಿ ಗ್ರಾಮದ ಉದ್ದಕ್ಕೂ ಹಸಿರು ತಳಿರು ತೋರಣದ ಜೊತೆಗೆ ಜಗಜಗಿಸುವ ವಿವಿಧ ಬಣ್ಣದ ವಿದ್ಯುತ್ ದೀಪಾಲಾಂಕಾರ ಮಾಡಲಾಗಿತ್ತು. ದೇವಸ್ಥಾನವನ್ನು ವಿವಿಧ ಹೂವುಗಳಿಂದ ಆಲಂಕರಿಸಲಾಗಿತ್ತು ಹೊರ ಜಿಲ್ಲೆ ಹಾಗೂ ಗ್ರಾಮಗಳಿಂದ ಅಗಮಿಸಿದ ಭಕ್ತರನ್ನ ಆಕರ್ಷಕವಾಗಿ ಮನಸೊರಗೊಳಿಸಿತು.

Tags:
error: Content is protected !!