ಮಂಡ್ಯ : ತಾಲೂಕಿನ ಸೂನಗಹಳ್ಳಿ-ಬೂತನಹೊಸೂರು ನಡುವಿನ ಹೆಬ್ಬಾಳ ಕಟ್ಟೆ ಬಳಿ ಕಬ್ಬಿನ ಗದ್ದೆಯಲ್ಲಿ ಬುಧವಾರ ಮೂರು ಚಿರತೆ ಮರಿಗಳು ಪತ್ತೆಯಾಗಿವೆ. ಹೀಗಾಗಿ ತಾಯಿ ಚಿರತೆಯನ್ನು ಸೆರೆ ಹಿಡಿದು ಅದರೊಂದಿಗೆ ಮರಿಗಳನ್ನು ಸೇರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
ಬೂತನಹೊಸೂರು ಗ್ರಾಮದ ನಿವಾಸಿ ಧರ್ಮರಾಜು ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ ಮೂರು ಚಿರತೆ ಮರಿಗಳು ಕಂಡು ಬಂದಿವೆ. ಆ ವೇಳೆ ರೈತರು ಚಿರತೆ ಮರಿಗಳನ್ನು ಹಿಡಿದು ಚೀಲವೊಂದರಲ್ಲಿ ಹಾಕಿ ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.
ಆರ್ಎಫ್ಒ ಶೈಲಜಾ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯು ಚಿರತೆ ಕಾರ್ಯಪಡೆ ಸಿಬ್ಬಂದಿಯೊಂದಿಗೆ ಬೋನನ್ನು ತಂದು ಚಿರತೆ ಮರಿಗಳನ್ನು ರಕ್ಷಿಸಿದ್ದಾರೆ.
ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಗಳನ್ನು ತಾಯಿಯೊಂದಿಗೆ ಸೇರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಅದೇ ಸ್ಥಳದಲ್ಲಿ ಚಿರತೆ ಕೇಜ್ನ್ನು ಇಟ್ಟು ಅದರೊಳಗೆ ಮರಿಗಳನ್ನು ಬಿಟ್ಟಿದ್ದಾರೆ. ಚಿರತೆಗಳು ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ. ಇದರೊಂದಿಗೆ ಕಬ್ಬಿನ ಗದ್ದೆಗಳಲ್ಲಿ ಚಿರತೆಗಳು ಮರಿ ಹಾಕುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದ ರೈತರು ಭಯಭೀತಗೊಂಡಿದ್ದಾರೆ. ಹೀಗಾಗಿ ಚಿರತೆ ಸೆರೆಗೆ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಯಿ ಚಿರತೆಯು ಮರಿಗಳನ್ನು ಬಿಟ್ಟು ಹೋಗುವಂತಿಲ್ಲ. ಚಿರತೆ ಕೇಜ್ನಲ್ಲಿ ಮರಿಗಳನ್ನು ಹಾಕಿಟ್ಟು, ತಾಯಿಯೊಂದಿಗೆ ಸೇರಿಸುವ ಪ್ರಯತ್ನ ಮಾಡಿದ್ದೇವೆ ಎಂದು ವಲಯ ಅರಣ್ಯಾಧಿಕಾರಿ ಶೈಲಜಾ ಅವರು ತಿಳಿಸಿದರು. ಮರಿಗಳನ್ನು ಕಂಡು ಚಿರತೆ ಗೇಜ್ನೊಳಗೆ ತಾಯಿ ಚಿರತೆ ನುಗ್ಗಿದರೆ ಅದರೊಳಗೆ ಸೆರೆಯಾಗುತ್ತದೆ. ಆಗ ಕೆಲವು ದಿನಗಳು ತಾಯಿ ಚಿರತೆ ಹಾಗೂ ಮರಿಗಳನ್ನು ಒಟ್ಟಿಗೆ ಇಟ್ಟು, ಸಿಸಿ ಟಿವಿ ಕ್ಯಾಮೆರಾ ಮೂಲಕ ಅವುಗಳ ವರ್ತನೆ ಮೇಲೆ ನಿಗಾ ವಹಿಸಲಾಗುತ್ತದೆ. ಮರಿಗಳನ್ನು ತಾಯಿಯು ಹತ್ತಿರ ಸೇರದಿದ್ದರೆ ಇಲಾಖೆಯ ನಿಯಮಗಳಂತೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.





