Mysore
25
overcast clouds
Light
Dark

ಮಂಡ್ಯ; ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯಾಪ್ತಿಯೊಳಗಿನ ಕಬ್ಬನ್ನು ಮಾತ್ರ ಖರೀದಿಸಬೇಕು; ಜಿಲ್ಲಾಧಿಕಾರಿ ಡಾ. ಕುಮಾರ

ಮಂಡ್ಯ:  ಜಿಲ್ಲೆಯಲ್ಲಿರುವ 5 ಸಕ್ಕರೆ ಕಾರ್ಖಾನೆಗಳು ತಮಗೆ ನಿಗಧಿ ಮಾಡಿರುವ ವ್ಯಾಪ್ತಿಯಲ್ಲಿ ಮಾತ್ರ ರೈತರಿಂದ ಕಬ್ಬನ್ನು ಖರೀದಿಸಬೇಕು. ಅನಧಿಕೃತವಾಗಿ ಬೇರೆ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರಿಂದ ಕಬ್ಬು ಖರೀದಿಸಿದರೆ ಅಂತಹ ಸಕ್ಕರೆ ಕಾರ್ಖಾನೆಯ ಪರವಾನಿಗೆ ರದ್ದುಪಡಿಸಲು ಜಿಲ್ಲಾಧಿಕಾರಿ ಡಾ. ಕುಮಾರ ಎಚ್ಚರಿಕೆ ನೀಡಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಶುಗರ್ ಫ್ಯಾಕ್ಟರಿ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿ ಬರದ ಹಿನ್ನೆಲೆಯಲ್ಲಿ ಕಬ್ಬಿನ ಇಳುವರಿ ಸಹ ಕಡಿಮೆ ಇರುತ್ತದೆ. ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆಗೆ ಸ್ಪರ್ಧೆ ಉಂಟಾಗುವ ಸಾಧ್ಯತೆಯಿದ್ದು, ಸಕ್ಕರೆ ಕಾರ್ಖಾನೆಗಳು ಲಾಭ/ ನಷ್ಟ ಯಾವುದೇ ಉಂಟಾದರು ತಮ್ಮ ವ್ಯಾಪ್ತಿಗೆ ನಿಗಧಿಪಡಿಸಿದ ಕಬ್ಬನ್ನು ಮಾತ್ರ ಅರೆಯಬೇಕು ಎಂದರು.

ಏಕ ಕಾಲದಲ್ಲಿ ಕಬ್ಬು ಅರೆಯುವಿಕೆಗೆ ಪ್ರಸ್ತಾವನೆ 2024 – 25 ನೇ ಸಾಲಿನ ಹಂಗಾಮಿನ ಕಬ್ಬು ಅರೆಯುವಿಕೆಗೆ ಸಂಬಂಧಿಸಿದಂತೆ ಯಾವುದಾದರು ಒಂದು ಸಕ್ಕರೆ ಕಾರ್ಖಾನೆ ಬೇರೆ ಸಕ್ಕರೆ ಕಾರ್ಖಾನೆಗಿಂತ ಮೊದಲು ಅರೆಯುವಿಕೆ ಪ್ರಾರಂಭಿಸಿದರೆ ಎಲ್ಲಾ ರೈತರು ತಮ್ಮ ಕಬ್ಬು ಖರೀದಿಸುವಂತೆ ಸಕ್ಕರೆ ಕಾರ್ಖಾನೆಗೆ ಮುಗಿ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ 5 ಸಕ್ಕರೆ ಕಾರ್ಖಾನೆಗಳು ಏಕಕಾಲದಲ್ಲಿ ಕಬ್ಬು ಅರೆಯಲು ಜುಲೈ 15 ರಿಂದ 30 ರವರೆಗೆ ಯಾವುದಾದರು ಒಂದು ದಿನಾಂಕವನ್ನು ನಿಗಧಿಪಡಿಸಿಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬು ಬೆಳೆಯುವ ಪ್ರಕ್ರಿಯೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಬೇಕು. ರೈತರ ಕುಂದು ಕೊರತೆ ಸಭೆಯಲ್ಲಿ ರೈತರು ಕಬ್ಬು ಬಿತ್ತನೆಗೆ ಸಕ್ಕರೆ ಕಾರ್ಖಾನೆಗಳು ಬಿತ್ತನೆ ಕಬ್ಬು ಒದಗಿಸುವಂತೆ ಚರ್ಚಿಸಿದ್ದಾರೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ನಡೆಸುವ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ವರದಿ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್. ನಾಗರಾಜು, ಜಂಟಿ ಕೃಷಿ ನಿರ್ದೇಶಕ ಅಶೋಕ್, ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಎಂ ಪಿ ಕೃಷ್ಣಕುಮಾರ್ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕರುಗಳು ಉಪಸ್ಥಿತರಿದ್ದರು.