Mysore
21
overcast clouds

Social Media

ಮಂಗಳವಾರ, 22 ಅಕ್ಟೋಬರ್ 2024
Light
Dark

ಮಂಡ್ಯ: ಬಾಬು ಜಗಜೀವನ ರಾಮ್ ಭವನಕ್ಕೆ ಶಂಕುಸ್ಥಾಪನೆ

ಮಂಡ್ಯ: ಜಿಲ್ಲೆಯಲ್ಲಿ 3 ಕೋಟಿ 80 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಾಬು ಜಗಜೀವನ ರಾಮ್ ಭವನಕ್ಕೆ   ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಸೋಮವಾರ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ನಗರದ ವಿವೇಕನಾಂದನಗರದಲ್ಲಿ ಭವನ ನಿರ್ಮಾಣವಾಗುತ್ತಿದ್ದು, ಶಾಸಕ ರವಿಕುಮಾರ್ ಜಿಲ್ಲೆಯ ಅಭಿವೃದ್ಧಿಗಾಗಿ ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ ಅವರ ಕಾರ್ಯ ಶ್ಲಾಘನೀಯ ಎಂದರು.

ಭವನದ ಶಂಕುಸ್ಥಾಪನೆ ನೇರವೇರಿದೆ, ಬಹುಶಃ ಮುಂದಿನ 1 ವರ್ಷದಲ್ಲಿಯೇ ಭವನವನ್ನು ಪೂರ್ಣಗೊಳಿಸಿ ಉದ್ಘಾಟಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ಹೇಳಿದರು.

ಬಾಡಿಗೆ ಕಟ್ಟಡದಲ್ಲಿ ನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ನಿಲಯಗಳಿಗೆ ಸ್ಥಳವನ್ನು ನಿಗಧಿಪಡಿಸಿ ಹಂತ ಹಂತವಾಗಿ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದರು.

ಶಾಸಕ ಪಿ ರವಿಕುಮಾರ್ ಮಾತನಾಡಿ, ಮಂಡ್ಯ ಜಿಲ್ಲೆಯೂ ನಿರ್ಮಾಣವಾಗಿ ಸುಮಾರು 70 ವರ್ಷಗಳು ಕಳೆದರು ಇಂದಿಗೂ ಜಿಲ್ಲೆಯಲ್ಲಿ ಡಾ ಬಾಬು ಜಗಜೀವನ ರಾಮ್ ಭವನವಿಲ್ಲ ಎನ್ನುವುದು ಮುಖಂಡರುಗಳ ಚಿಂತೆಯಾಗಿತ್ತು. ನಾನು ಶಾಸಕನಾದ ನಂತರ ಬಾಬು ಜಗಜೀವನ ರಾಮ್ ಭವನವಿಲ್ಲದಿರುವುದನ್ನು ಮನಗೊಂಡು ಭವನದ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆಗೊಳಿಸುವಂತೆ ಸಚಿವರನ್ನು ಒತ್ತಾಯಿಸಿದ್ದೆ.

ಸಚಿವರು ನನ್ನ ಒತ್ತಡದ ಮೇಲೆ  3 ಕೋಟಿ 80 ಲಕ್ಷ ರೂ.ವೆಚ್ಚದಲ್ಲಿ ಉತ್ತಮ ಹಾಗೂ ಗುಣಮಟ್ಟದ ಡಾ.ಬಾಬು ಜಗಜೀವನ್ ರಾಮ್ ಭವನವನ್ನು ನಿರ್ಮಿಸಲು ಸಹಕರಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್‌  ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಮೈಸೂರು ಸಕ್ಕರೆ ಕಂಪನಿ ನಿಯಮಿತದ ಅಧ್ಯಕ್ಷ ಸಿಡಿ ಗಂಗಾಧರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಮ್,ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ನಗರಸದಸ್ಯರಾದ ಶಿವಪ್ರಕಾಶ್, ಶ್ರೀಧರ್, ಮುಖಂಡರಾದ ಚಂದ್ರಶೇಖರ್, ಪಾಪಯ್ಯ ಸೇರಿದಂತೆ ಮುಖಂಡರುಗಳು ಉಪಸ್ಥಿತರಿದ್ದರು.

Tags: