ಮಂಡ್ಯ: ಜಿಲ್ಲೆಯ ಪರಿಶಿಷ್ಟ ಜಾತಿ ವರ್ಗದ ಜನರಿಗೆ ಇರುವ ಸಮಸ್ಯೆಗಳು ಮತ್ತು ಪರಿಹಾರಗಳ ಸಂಬಂಧ ಮೊದಲ ಜಿಲ್ಲಾ ಮಟ್ಟದ ಮೂಲ ಭಾರತೀಯರ ಪ್ರಥಮ ದುಂಡು ಮೇಜಿನ ಸಭೆಯ ಪೂರ್ವಭಾವಿ ಸಭೆಯನ್ನು ನವೆಂಬರ್.19ರ ಬೆಳಿಗ್ಗೆ 11 ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್ಸ್ನ ಅಧ್ಯಕ್ಷ ಗಂಗರಾಜ್ ಹನಕೆರೆ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ತಾಲೂಕಿನ ಹನಕೆರೆ ಗ್ರಾಮದಲ್ಲಿ ಕಾಲಭೈರೇಶ್ವರ ದೇವಸ್ಥಾನಕ್ಕೆ ಪರಿಶಿಷ್ಠರ ಪ್ರವೇಶ ಕಾರ್ಯಕ್ರಮದ ಸಂಬಂಧ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಲಾಗಿದೆ.
ಕೆಲವು ಕಿಡಿಗೇಡಿಗಳ ಕುಕೃತ್ಯದಿಂದ ಇಂತಹ ಘಟನೆ ನಡೆದಿದ್ದು, ಸವರ್ಣೀಯರೊಂದಿಗೆ ಯಾವುದೇ ಘರ್ಷಣೆ ನಡೆದಿಲ್ಲ. ಈ ನಿಟ್ಟಿನಲ್ಲಿ ಬುದ್ದ ಸಂದೇಶ ಸಾರುವ ಹಿನ್ನಲೆ ಭಾರತೀಯರ ನಡೆ, ಬುದ್ದನ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲು ಸದರಿ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಮಾಡಿ, ಮಂಡ್ಯ ನಗರ ಅಂಬೇಡ್ಕರ್ ಪುತ್ತಳಿಯಿಂದ ಹನಕೆರೆವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಹೇಳಿದರು.
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಉಪಾಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿ, ಹನಕೆರೆಯಲ್ಲಿ ನಡೆದ ಘಟನೆ ಬೆರಳೆನಿಕೆಯಷ್ಟು ಮಂದಿ ಮಾಡಿದ ಕುಚೇಸ್ಟೆ ಇದಾಗಿದ್ದು, ಅನಾಗರೀಕತೆಯಿಂದ ಪ್ರಬುದ್ಧತೆಯೆಡೆಗೆ ನಡೆಯುವ ಹಿನ್ನಲೆ ಕಾಲು ನಡಿಗೆ ಜಾಥ ಹಮ್ಮಿಕೊಳ್ಳಲು ನಿರ್ಣಯಿಸಲು ಸಭೆ ಆಯೋಜಿಸಿದ್ದು, ಸದರಿ ಕಾರ್ಯಕ್ರಮಕ್ಕೆ ಜಿಲ್ಲೆಯ ಪ್ರಗತಿ ಪರ ಚಿಂತಕರು ಆಗಮಿಸುವಂತೆ ಮನವಿ ಮಾಡಿದರು.
ಹನಕೆರೆ ಗ್ರಾಮದ ಮುಖಂಡ ಅಭಿ ಹನಕೆರೆ ಮಾತನಾಡಿ, ಹನಕೆರೆ ಘಟನೆ ವಿಚಾರವಾಗಿ ಯಾರು ವಿಚಲಿತರಾಗಬೇಕಾದ ಅವಶ್ಯಕೆಯಿಲ್ಲ, ಹನಕೆರೆಯಲ್ಲಿ ಎಲ್ಲ ಸಮುದಾಯ ಒಟ್ಟಾಗಿದ್ದು, ಹನಕೆರೆಯ ಮೂಲಕ ದೇಶಕ್ಕೆ ಏಕತೆಯ ಶಾಂತಿ ಸಂದೇಶ ರವಾನಿಸಲಿ. ಈ ಕಾರ್ಯಕ್ಕೆ ಕಾಲಭೈರೇಶ್ವರ ದೇವಸ್ಥಾನ ಸಮಿತಿ ಪರವಾಗಿ ಬೆಂಬಲವಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸ್ವಾಭಿಮಾನಿ ಸಮಾಜದ ರಾಜ್ಯಾಧ್ಯಕ್ಷ ಹೆಚ್.ಎನ್.ನರಸಿಂಹಮೂರ್ತಿ, ಟಿಪ್ಪು ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಅಮ್ಜದ್ ಪಾಷ, ವಕೀಲ ಜೆ.ರಾಮಯ್ಯ, ಮೋಹನ್, ದೇವಯ್ಯ ಇತರರಿದ್ದರು.





