Mysore
22
mist

Social Media

ಮಂಗಳವಾರ, 13 ಜನವರಿ 2026
Light
Dark

ಮಂಡ್ಯ ರೈತರ ಬಿಟ್ಟುಬಿಡದೆ ಕಾಡುತ್ತಿವೆ ಗಜಪಡೆ

  • ಮೋಹನ್ ಕುಮಾರ್ ಬಿ.ಟಿ

ಮಂಡ್ಯ : ಕಳೆದ 15 ದಿನಗಳ ಹಿಂದೆ ಕಾಡಿನಿಂದ ನಾಡಿಗೆ ಪ್ರವೇಶಿಸಿರುವ ಗಜಪಡೆಯ ಹಿಂಡು ಮಂಡ್ಯ ಜಿಲ್ಲೆಯ ರೈತರನ್ನು ಬೆಂಬಿಡದೆ ಕಾಡುತ್ತಿವೆ.

ಮೊದಲು ಮದ್ದೂರು ತಾಲ್ಲೂಕಿನ ಶಿಂಷಾ ನದಿ ಪಾತ್ರದಲ್ಲಿ ಕಾಣಿಸಿಕೊಂಡ ಎರಡು ಮರಿ ಆನೆ ಸೇರಿದಂತೆ 10 ಆನೆಗಳ ಹಿಂಡು, ಬಳಿಕ ಮದ್ದೂರು ತಾಲ್ಲೂಕಿನ ಭಾರತೀನಗರದ ಸಮೀಪ ಕಾಣಿಸಿಕೊಂಡವು.

ಇದೇ ಗಜಪಡೆಯು ಮಳವಳ್ಳಿ ತಾಲ್ಲೂಕಿನ ಹಲಗೂರು ಭಾಗದಲ್ಲಿ ಕಾಣಿಸಿಕೊಂಡವು. ಇದಾದ ಬಳಿಕ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಸಮೀಪದ ಬೆಟ್ಟದ ಪ್ರದೇಶದಲ್ಲಿ ಕಾಣಿಸಿಕೊಂಡು ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದವು.

15 ದಿನಗಳಿಂದಲೂ ಹಗಲು ಹೊತ್ತು ಕಬ್ಬಿನ ಗದ್ದೆ ಹಾಗೂ ತೆಂಗಿನ ತೋಟಗಳಲ್ಲಿ ವಾಸ ಮಾಡುವ ಇವು, ರಾತ್ರಿ ಹೊತ್ತು ತಮಗಿಷ್ಟ ಬಂದ ಕಡೆ ಪಯಣಿಸುತ್ತಿವೆ. ಮಂಗಳವಾರದಂದು ಮಂಡ್ಯ ತಾಲ್ಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು, 10 ಆನೆಗಳು ಕಬ್ಬಿನ ಗದ್ದೆಯಲ್ಲಿ ವಾಸ್ತವ್ಯ ಹೂಡಿದ್ದು, ಕಬ್ಬಿನ ಗದ್ದೆಯನ್ನು ನಾಶಪಡಿಸಿವೆ.

ಇದರಿಂದ ರೈತರು ಬಹಳ ಆತಂಕಗೊಂಡಿದ್ದು, ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳ ಹರಸಾಹಸಪಡುತ್ತಿದ್ದಾರೆ. 15 ದಿನದಿಂದಲೂ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರವೂ ಸಹ ಆನೆಗಳನ್ನು ಕಾಡಿಗೆ ಅಟ್ಟಲು ಶತಪ್ರಯತ್ನ ನಡೆಸಿದರು.

ಸಾಕಾನೆ ಕರೆತರಲು ನಿರ್ಧಾರ : ಕಬ್ಬಿನ ಗದ್ದೆಯಲ್ಲಿ ಆನೆಗಳು ಬೀಡುಬಿಟ್ಟಿರುವುದರಿಂದ ಮಂಡ್ಯ-ಮಳವಳ್ಳಿ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೆಬ್ಬಕವಾಡಿ ಗ್ರಾಮದಿಂದ ಚಿಕ್ಕಮುಲಗೂಡು ಗ್ರಾಮದವರೆಗೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ರಸ್ತೆಯಲ್ಲಿ ಜೀಪ್ ನಿಲ್ಲಿಸಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದ ಬೇರೆ ಊರುಗಳನ್ನು ಬಳಸಿಕೊಂಡು ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ.

15 ದಿನಗಳಿಂದಲೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಕಾಡಿನತ್ತ ಹೋಗದಿರುವುದರಿಂದ ಸಾಕಾನೆಗಳನ್ನು ಕರೆತಂದು ಕಾರ್ಯಾಚರಣೆ ಚುರುಕುಗೊಳಿಸಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.
ಸ್ಥಳದಲ್ಲೇ ಆರ್‌ಎಫ್‌ಒ ಚೈತ್ರ ನಂದೀಪ್ ಮತ್ತು ಇತರೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದಾರೆ.

ತೆಂಗಿನ ಮರವೇರಿದ ರೈತ : ಮಂಗಳವಾರ ಬೆಳಿಗ್ಗೆ ಜಮೀನಿನ ಬಳಿ ಹೋದ ರೈತನೋರ್ವ ಆನೆಗಳ ಹಿಂಡು ಕಂಡು ಭಯದಿಂದ ತೆಂಗಿನ ಮರವೇರಿ ರಕ್ಷಣೆ ಪಡೆದಿದ್ದಾನೆ. ತೆಂಗಿನ ಮರದ ಮೇಲಿಂದಲೇ ಆನೆಗಳನ್ನು ಹಿಂಡನ್ನು ವಿಡಿಯೋ ಮಾಡಿದ್ದು, ಆನೆಗಳು ಮುಂದಿನ ಗದ್ದೆಗೆ ತೆರಳಿದ ಬಳಿಕ ಮರದಿಂದ ಕೆಳಗೆ ಇಳಿದಿದ್ದಾನೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!