ಮಂಡ್ಯ: ಮುಂದಿನ ಎರಡು ವರ್ಷಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳ ಅಭಿವೃದ್ಧಿಗಿಂತ ಮುಂಚೂಣಿಯಲ್ಲಿರಲಿದ್ದು, ಇದಕ್ಕೆ ಶ್ರಮಿಸುತ್ತಿರುವ ಸ್ಥಳೀಯ ಶಾಸಕ ರವಿಕುಮಾರ್ ಗೌಡ ಅವರು ಉತ್ಸಾಹಿ ಶಾಸಕರೆಂದು ಸಚಿವ ಚಲುವರಾಯಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದರು.
ಮಂಡ್ಯ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ಆಯೋಜನೆ ಮಾಡಿದ್ದ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲಾ ಕೇಂದ್ರದ ವೃತ್ತಗಳ ಸೌಂದರ್ಯಿಕರಣ, ಉತ್ತಮ ರಸ್ತೆಗಳ ನಿರ್ಮಾಣ ಹಾಗೂ ಅಗತ್ಯ ಸೌಲಭ್ಯಗಳ ಅಳವಡಿಕೆಯಿಂದ ಜಿಲ್ಲಾ ಕೇಂದ್ರಕ್ಕೆ ಇತರೆ ತಾಲ್ಲೂಕುಗಳ ಲಕ್ಷಾಂತರ ಜನತೆ ಬಂದು ಹೋಗುವ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರದ ನಿರೀಕ್ಷಿತ ಅಭಿವೃದ್ಧಿಗೆ ನನ್ನೊಡನೆ ಸ್ಪಂದಿಸುವ ಶಾಸಕರು ಚುನಾಯಿತರಾಗಬೇಕೆಂಬ ನನ್ನ ಕನಸು ಸಾಕಾರಗೊಂಡಿದೆ. ಜಿಲ್ಲೆಯ ಆರು ಶಾಸಕರು ಸೇರಿ ರಾಜ್ಯದ 139 ಶಾಸಕರ ಬಲವುಳ್ಳ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಅಭಿವೃದ್ಧಿಗೆ ಗಮನಹರಿಸುವ ಜವಾಬ್ದಾರಿ ನಮ್ಮ ಸರ್ಕಾರಕ್ಕಿದೆ ಎಂದು ಹೇಳಿದರು.





