ಮಂಡ್ಯ: ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಬಹುಕಾಲದ ಕನಸಾಗಿದ್ದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೂಲದಿಂದ ಪರಿಹಾರ ಒದಗಿಸಬೇಕೆಂಬ ಮಹತ್ವಕಾಂಕ್ಷಿ ಉದ್ದೇಶಕ್ಕೆ ಸಚಿವ ಸಂಪುಟ ಅಸ್ತು ಅಂದಿದೆ.
ಜಿಲ್ಲೆಯಲ್ಲಿ ಸಮಗ್ರ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡುವ ಮೂಲಕ ರೈತರ ಬಹುದಿನದ ಕನಸನ್ನು ಸಾಕಾರಗೊಳಿಸಲಾಗಿದೆ.
ಈಗಾಗಲೇ ಶಿವಮೊಗ್ಗದಲ್ಲಿ 2013 ರಲ್ಲಿ ಸಮಗ್ರ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪಿಸಿ ರೈತರ ಸಮಸ್ಯೆಗಳನ್ನು ನಿವಾರಿಸುವ ಕಾರ್ಯ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಮಂಡ್ಯದಲ್ಲೂ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ಕ್ಯಾಬಿನೆಟ್ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಹೊಸದಾಗಿ ಪ್ರಾರಂಭವಾಗುವ ವಿಶ್ವವಿದ್ಯಾಲಯಕ್ಕೆ ಬೆಂಗಳೂರು ಕೃಷಿ ವಿವಿಯಿಂದ ಮಂಡ್ಯ ಕೃಷಿ ಕಾಲೇಜು (ವಿ.ಸಿ ಫಾರಂ), ಹಾಸನ ಕೃಷಿ ಕಾಲೇಜು ಹಾಗೂ ಚಾಮರಾಜನಗರ ಕೃಷಿ ಕಾಲೇಜು ಸೇರ್ಪಡೆಯಾಗಲಿವೆ. ಅಲ್ಲದೇ ಶಿವಮೊಗ್ಗ ವಿಶ್ವವಿದ್ಯಾಲಯದಿಂದ ಪೊನ್ನಂಪೇಟೆ ಅರಣ್ಯ ಕಾಲೇಜು ಹಾಗೂ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಮೈಸೂರು ತೋಟಗಾರಿಕೆ ಕಾಲೇಜು ಸೇರ್ಪಡೆಯಾಗುತ್ತಿವೆ.
ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಶಿಕ್ಷಣ, ಸಂಶೋಧನೆ, ಹಾಗೂ ವಿಸ್ತರಣಾ ಘಟಕಗಳು ಮಂಡ್ಯ ವಿವಿಯಲ್ಲಿ ಪ್ರಾರಂಭವಾಗುವುದರಿಂದ ಈ ವಿಶ್ವವಿದ್ಯಾಲಯ ವ್ಯಾಪ್ತಿಗೆ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳು ಸೇರ್ಪಡೆಯಾಗುತ್ತವೆ. ಇನ್ನೂ ಶಿವಮೊಗ್ಗ ತೋಟಗಾರಿಕೆ ಹಾಗೂ ಕೃಷಿ ವಿಶ್ವವಿದ್ಯಾಲಯ ಮಾದರಿಯಲ್ಲಿ ಆರಂಭವಾಗುವ ಮಂಡ್ಯ ಕೃಷಿ ವಿಶ್ವವಿದ್ಯಾಲಯದಲ್ಲಿಯೂ ಸಹ ಎಲ್ಲಾ ಸಸ್ಯ ಶಾಸ್ತ್ರಗಳ ಸಮನ್ವಯತೆಯನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ.