Mysore
29
clear sky

Social Media

ಶನಿವಾರ, 31 ಜನವರಿ 2026
Light
Dark

ಯತ್ನಾಳ್‌ ವಿರುದ್ದ ಲಿಂಗಾಯುತ ಸ್ವಾಮೀಜಿ ಆಕ್ರೋಶ

ಮಂಡ್ಯ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಸವಣ್ಣನವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ವಿರುದ್ಧ ಲಿಂಗಾಯತ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದೆ ಎಂದು ಮಳವಳ್ಳಿಯ ಕಲ್ಯಾಣ ಬಸವೇಶ್ವರ ಮಠದ ಓಂಕಾರ ಸ್ವಾಮೀಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಸಮುದಾಯದವರಾಗಿ ಸಮುದಾಯವನ್ನು ಶಕ್ತಿಯಾಗಿ ಬಳಸಿಕೊಂಡು ಶಾಸಕ ಸ್ಥಾನವನ್ನು ಅಲಂಕರಿಸಕೊಂಡಿದ್ದು, ಬಸವಣ್ಣನವರ ವಿರುದ್ಧ ಹೊಳೆಗೆ ಹಾರಿಕೊಂಡರು ಎಂದು ಹೇಳಿಕೆ ನೀಡಿರುವುದು ಅಸಹನೀಯ. ಈ ರೀತಿಯ ಮಾತುಗಳನ್ನು ಆಡಿದವರನ್ನು ಸಮುದಾಯ ಕ್ಷಮಿಸುವುದಿಲ್ಲ ಎಂದು ಆಕ್ರೋಶಗೊಂಡರು.

ಪ್ರಚಾರಕ್ಕಾಗಿ ಬಸವಣ್ಣನವರನ್ನು ಹೀಯಾಳಿಸುವ ಮಟ್ಟಕ್ಕೆ ಮಾತುಗಳನ್ನಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದಲ್ಲ. ತಮ್ಮ ಹೇಳಿಕೆಯ ಮೂಲಕ ಬಸವತತ್ವದ ವಿರೋಧಿಯಾಗಿದ್ದು, ಸಮಾಜದಲ್ಲಿ ನಕಲಿ ಹಿಂದೂ ನಾಯಕರಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರನ್ನು ಲಿಂಗಾಯತ ಸಮುದಾಯವು ದೂರ ಇಡಬೇಕು ಎಂದು ಕರೆ ನೀಡಿದರು.

ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಮಾತನಾಡಿ, ರಾಜಕಾರಣಿಗಳು ಬಸವಣ್ಣನ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಾದುದಲ್ಲ, ಬಸವಣ್ಣನವರ ತತ್ವಾದರ್ಶಗಳನ್ನು ತಮ್ಮ ಓಟ್ ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡುತ್ತಿರುವುದು ದುರ್ದೈವದ ಸಂಗತಿ, ಬಿಜೆಪಿ ಪಕ್ಷ ಕೂಡಲೇ ಇವರನ್ನು ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಸಹಿಸದ ಬಿಜೆಪಿ ನಾಯಕರು ಈ ರೀತಿಯ ವರ್ತನೆಗೆ ಮುಂದಾಗಿದ್ದು, ಸರ್ಕಾರ ಕೂಡಲೇ ಇದರ ಸಂಬಂಧ ಸೂಕ್ತ ಕ್ರಮ ಕೈಗೊಂಡು. ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಮದ್ದೂರು ಅಧ್ಯಕ್ಷ ಶಿವಲಿಂಗಪ್ಪ, ಶಿವರುದ್ರಸ್ವಾಮಿ, ಬೆಳ್ಳಪ್ಪ, ಆನಂದ್, ವೀರಭದ್ರಯ್ಯ, ಮಂಜುನಾಥ್, ಇದ್ದರು.

Tags:
error: Content is protected !!