ಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್ಎಸ್ ಜಲಾಶಯ ತುಂಬು ತುಳುಕುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕನ್ನಂಬಾಡಿ ಬಳಿ ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ಬಿಂದುವಿನಿಂದ ಕೆಳಗೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯವೇ ಕನ್ನಂಬಾಡಿ ಕಟ್ಟೆ ಅಥವಾ ಕೃಷ್ಣರಾಜಸಾಗರ ಜಲಾಶಯ.
ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಈ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಬಾಗಿನ ಅರ್ಪಿಸುವ ಸಂಪ್ರದಾಯವು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅದರಲ್ಲೂ ಆಷಾಢ ಮಾಸದಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಿಸುತ್ತಿರುವುದು ಇದೇ ಮೊದಲು.
ಶ್ರಾವಣ ಮಾಸದಲ್ಲಿ ಜಲಾಶಯ ತುಂಬಿ, ವರಮಹಾಲಕ್ಷ್ಮಿ ಹಬ್ಬ ಸಮೀಪವಿದ್ದಾಗ ಕೆಆರ್ಎಸ್ಗೆ ಬಾಗಿನ ಅರ್ಪಿಸುವುದು ವಾಡಿಕೆ. ಆದರೆ ಈ ಬಾರಿ ವರುಣನ ಕೃಪದಿಂದ ಮುಂಚಿತವಾಗಿಯೇ ಜಲಾಶಯ ತುಂಬಿದೆ. ಹಿನ್ನೆಲೆ, ಆಷಾಢ ಮಾಸದಲ್ಲೇ ಜಲಾಶಯಕ್ಕೆ ಬಾಗಿನ ಅರ್ಪಣೆ ನಡೆಯುತ್ತಿದೆ. 1989ರಿಂದ, ಅಂದರೆ 35 ವರ್ಷಗಳಿಂದ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಅವರೇ ಪೂಜಾ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ.
ಬೇಸಿಗೆಯಿಂದ ಬಾಯ್ತೆರೆಯುತ್ತಿರುವ ಭೂಮಾತೆಗೆ ವಸಂತಕಾಲದಲ್ಲಿ ತಂಪನ್ನೊದಗಿಸಿ, ಶ್ರಾವಣ ಮಾಸದಲ್ಲಿ ಮಳೆಯ ಆರ್ಭಟ ಹಿಮ್ಮಡಿಗೊಳಿಸುತ್ತದೆ. ಜತೆಗೆ ಶ್ರಾವಣ ಮಾಸದಲ್ಲಿ ಹಬ್ಬಗಳು ಪ್ರಾರಂಭವಾಗುತ್ತದೆ. ಭತ್ತಿ ಹೋಗಿದ್ದ ನದಿಗಳು ಆಷಾಢದಲ್ಲಿ ತುಂಬಿ ತುಳುಕುತ್ತವೆ. ಇದಕ್ಕೆ ಕೃತಜ್ಞತೆ ಭಾವದಿಂದ ಕಾವೇರಿ ಮಾತೆಯನ್ನು ನಮಸ್ಕರಿಸಿ ಬಾಗಿನ ಅರ್ಪಿಸಲಾಗುತ್ತಿದೆ ಎಂದು ಜೋತಿಷಿ ಭಾನುಪ್ರಕಾಶ್ ಶರ್ಮಾ ತಿಳಿಸಿದ್ದಾರೆ.
ನಾಡಿನ ಜೀವನದಿ ಕಾವೇರಿಯನ್ನು ತಾಯಿ ಎಂದು ಕರೆಯಲಾಗುತ್ತದೆ. ಅದಕ್ಕಾಗಿ ತಾಯಿಗೆ ಬಿದಿರಿನ ಮೊರದಲ್ಲಿ ಅರಿಶಿಣ,ಕುಂಕುಮ, ಹೂ, ಬೆಲ್ಲ, ಅಕ್ಕಿ, ಕಾಯಿ, ರವಿಕೆ ಪೀಸು ಹಾಗೂ ಕಂಚುಕಗಳನಿಟ್ಟು ತಾಯಿಗೆ ಪೂಜೆ ನೇರವೇರಿಸಿ ಬಾಗಿನ ಸಮರ್ಪಿಸಲಾಗುತ್ತದೆ.
ಈ ವಾಡಿಕೆ ಹಿಂದಿನಿಂದಲೂ ನಡೆದು ಬಂದಿದೆ. ಹೀಗಾಗಿ ಈ ಬಾರಿಯೂ ಅದೇ ರೀತಿಯ ವಾಡಿಕೆಯನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಿದರು.
ಮೊರದ ಜೊತೆಗೆ ಇವುಗಳನ್ನು ಪೂಜೆ ಮಾಡಿ ನಂತರ ಬಾಗಿನ ಅರ್ಪಿಸುವ ಸಂಪ್ರದಾಯ ನಡೆದು ಬಂದಿದೆ. ಅಧೆ ರೀತಿ ಮಾಡಲಾಗುತ್ತದೆ.