Mysore
20
overcast clouds
Light
Dark

ಮಂಡ್ಯ: ಎಚ್‌ಡಿಕೆ ಅಭಿನಂದನಾ ಬ್ಯಾನರ್‌ನಲ್ಲಿ ಕಣ್ಮರೆಯಾದ ಎಚ್‌ಡಿ ರೇವಣ್ಣ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ತಮ್ಮ ಕ್ಷೇತ್ರಕ್ಕೆ ಆಗಮಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ಇಟ್ಟುಕೊಳ್ಳಲಾಗಿದೆ.

ಈ ಬಗ್ಗೆ ಎಲ್ಲಾ ಕಡೆಗಳಲ್ಲಿಯೂ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಭವ್ಯ ಸ್ವಾಗತ ಕೋರುವ ರೀತಿಯಲ್ಲಿ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ಕಟ್ಟುವ ಮೂಲಕ ತಮ್ಮ ಅಭಿಮಾನವನ್ನು ತೋರುತ್ತಿದ್ದಾರೆ.

ಇನ್ನು ಯಾರೂ ಊಹಿಸದ ರೀತಿಯಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್‌ ಕಾರ್ಯಕರ್ತರು ದೇವೇಗೌಡರ ಕುಟುಂಬ ವ್ಯಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.

ಹೌದು ಹಾಸನದ ಹೊಳೆ ನರಸೀಪುರ ಶಾಸಕ ಎಚ್‌ಡಿ ರೇವಣ್ಣ, ಪುತ್ರರಾದ ಪ್ರಜ್ವಲ್‌, ಸೂರಜ್‌ ಹಾಗೂ ಪತ್ನಿ ರೇಣುಕಾ ವಿರುದ್ಧ ಹಲವಾರು ಅಕ್ರಮ, ಅಪಹರಣ, ಲೈಂಗಿಕ ದೌರ್ಜನ್ಯ ಆರೋಪಗಳು ದಾಖಲಾದ ಹಿನ್ನಲೆ ಮಂಡ್ಯ ಜೆಡಿಎಸ್‌ ಜನತೆ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ.

ಅಭಿನಂದನಾ ಸಮಾರಂಭದ ಫ್ಲೆಕ್ಸ್‌, ಬ್ಯಾನರ್‌ಗಳಲ್ಲಿ ಮೈತ್ರಿ ನಾಯಕರ ಎಲ್ಲಾ ಫೋಟೋಗಳು ರಾರಾಜಿಸುತ್ತಿದ್ದರೇ, ಎಚ್‌ಡಿ ರೇವಣ್ಣ, ಸೂರಜ್‌ ಹಾಗೂ ಪ್ರಜ್ವಲ್‌ರ ಫೊಟೋಗಳು ಕಣ್ಮರೆಯಾಗಿದೆ. ಪ್ರಜ್ವಲ್‌ ಬದಲಿಗೆ ನಿಖಿಲ್‌ ಫೋಟೋ ಬ್ಯಾನರ್‌ನಲ್ಲಿ ಕಾಣಿಸಿಕೊಂಡಿದೆ.

ನರೇಂದ್ರ ಮೋದಿ, ಜೆಪಿ ನಡ್ಡಾ, ದೇವೇಗೌಡರು, ಎಚ್ಡಿ ಕುಮಾರಸ್ವಾಮಿ, ಜಿಟಿ ದೇವೇಗೌಡ, ನಿಖಿಲ್‌ ಸೇರಿದಂತೆ ಹಲವು ನಾಯಕರ ಫೋಟೋಗಳ ನಗರ ಬ್ಯಾನರ್‌ ತುಂಬೆಲ್ಲಾ ಕಾಣುತ್ತಿದೆ. ಆದರೆ ಎಲ್ಲಿಯೂ ರೇವಣ್ಣ ಮತ್ತು ಫ್ಯಾಮಿಲಿ ಫೋಟೋ ಕಾಣಿಸುತ್ತಿಲ್ಲ. ಅವರನ್ನು ಪಕ್ಷದ ಜತೆಗೆ ಬ್ಯಾನರ್‌ಗಳಿಂದಲೂ ದೂರ ಇಟ್ಟಿದ್ದಾರೆ ಮಂಡ್ಯದ ಜನತೆ.