ಮಂಡ್ಯ: ತಮಿಳುನಾಡಿನಲ್ಲಿ ಅರುಂಧತಿಯಾರ್ ಸಮುದಾಯಕ್ಕೆ ಶೇ 3ರಷ್ಟು ಮೀಸಲಾತಿ ನೀಡುತ್ತಿದ್ದು, ರಾಜ್ಯದಲ್ಲಿಯೂ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಕರ್ನಾಟಕ ಅರುಂಧತಿಯಾರ್ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಫಾಯಿ ಕರ್ಮಚಾರಿ, ಮ್ಯಾನುಯಲ್ ಸ್ಕ್ಯಾವೆಂಜರ್ ಸೇರಿದಂತೆ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿದವರನ್ನು ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ ಜಾತಿ ಧೃಢೀಕರಣದಲ್ಲಿದ್ದು, ತಮಿಳುನಾಡಿನಲ್ಲಿ ಹಲವು ಸಂಶೋಧನೆ ಮೂಲಕ ನಮ್ಮ ಜಾತಿಯನ್ನು ಅರುಂಧತಿಯಾರ್ ಎಂದು ಗುರುತಿಸಲಾಗಿದೆ.
ಮಾದಿಗ ಜಾತಿಯಲ್ಲಿ ಎಡ, ಬಲಗಳಿದ್ದು, ಎಡ ಭಾಗದಲ್ಲಿ ಅರುಂಧತಿಯಾರ್ ಜಾತಿಯು ಬರಲಿದೆ. ಮಾದಿಗ ಜಾತಿಗೆ ಪ್ರತ್ಯೇಕ ಮೀಸಲಾತಿ ದೊರೆಯಲಿದ್ದು, ಅವರ ನಡುವೆ ಅರುಂಧತಿಯಾರ್ ಸಮುದಾಯವು ಶೈಕ್ಷಣಿಕ, ಸಮಾಜಿಕ, ಆರ್ಥಿಕ ಸಮಾನತೆಯನ್ನು ಪಡೆಯಬೇಕಾಗಿದ್ದು, ತಮಿಳುನಾಡಿನಲ್ಲಿ ಶೇ 3ರಷ್ಟು ಮೀಸಲಾತಿ ಅರುಂಧತಿಯಾರ್ ಸಮುದಾಯಕ್ಕೆ ನೀಡುತ್ತಿದ್ದು, ರಾಜ್ಯದಲ್ಲಿಯೂ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಜಾತಿ ಮೀಸಲಾತಿ ಸಂಬಂಧ ನ್ಯಾ.ನಾಗಮೋಹನ್ದಾಸ್ ಅವರು ವರದಿ ಸಲ್ಲಿಸಿದ್ದು, ಸರ್ಕಾರದಿಂದ ವರದಿಯ ವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದೆ. ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸಮಾಜದ ಬಂಧುಗಳು ಸಮೀಕ್ಷೆಯಲ್ಲಿ ಜಾತಿಯನ್ನು ಅರುಂಧತಿಯಾರ್ ಎಂದು ನಮೂದಿಸಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷೆ ನಾಗಮಣಿ.ಕೆ, ರೇಖಾ, ವಿಜಯ್, ಚಿನ್ನರಾಜು, ಬಿ.ರಾಜು ಇದ್ದರು.





