Mysore
23
overcast clouds

Social Media

ಸೋಮವಾರ, 24 ಆಗಸ್ಟ್ 2026
Light
Dark

ಬೆಳೆಗಳನ್ನು ಸಾಗಿಸಲು ರಸ್ತೆ ನಿರ್ಮಿಸಿಕೊಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ.

ಕೆ.ಆರ್.ಪೇಟೆ:– ರೈತರು ತಾವು ಬೆಳೆದ ಬೆಳೆಗಳನ್ನು ಸಾಗಿಸಲು ಸಮರ್ಪಕವಾದ ರಸ್ತೆಯಿಲ್ಲದೇ ಹೈರಾಣಾಗಿದ್ದು ಕೂಡಲೇ ತಮ್ಮ ಬೆಳೆಗಳನ್ನು ಸಾಗಿಸಲು ಸೂಕ್ತ ರಸ್ತೆ ನಿರ್ಮಿಸಿಕೊಡುವಂತೆ ಒತ್ತಾಯಿಸಿ ತಾಲ್ಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿ ಗ್ರಾಮದ ರೈತರು ಗುಂಡಿಬಿದ್ದ ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸಿದರು.

ಗ್ರಾಮದ ಸ್ಮಶಾನದ ಪಕ್ಕದಲ್ಲಿ ಶೀಳನೆರೆ ಗ್ರಾಮಕ್ಕೆ ತೆರಳಲು ಈ ಹಿಂದೆಯೇ ರಸ್ತೆ ಮಾಡಲಾಗಿತ್ತು. ಆದರೆ ಆ ರಸ್ತೆಯು ಪ್ರಾಕೃತಿಕ ವಿಕೋಪಗಳಿಗೆ ಸಿಲುಕಿ ಹದಗೆಟ್ಟಿದೆ. ಈಗ ಈ ರಸ್ತೆಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು ಹಾಗೂ ಮಣ್ಣಿನ ಸವಕಳಿಯಿಂದ ವಾಹನಗಳನ್ನಾಗಲಿ ಅಥವಾ ಎತ್ತಿನ ಗಾಡಿಗಳನ್ನಾಗಲಿ ಚಲಾಯಿಸಲು ಸಾಧ್ಯವಾಗದೇ ಪರದಾಡುವಂತಾಗಿದೆ.

ಇದೇ ರಸ್ತೆಯನ್ನುಅವಲಂಬಿಸಿರುವ  ಸುಮಾರು ನೂರಾರು ರೈತರುಗಳಿಗೆ ತಾವು ಬೆಳೆದ ಬೆಳೆಗಳನ್ನು ಸಾಗಿಸಲು ಬಹಳ ಅನಾನುಕೂಲವಾಗಿದೆ. ನೂರಾರು ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ರೈತರು ಹೆಚ್ಚಾಗಿ ಕಬ್ಬನ್ನು ಬೆಳೆಯುತ್ತಿದ್ದು ತಾವು ಬೆಳೆದ ಬೆಳೆಗಳನ್ನು ಸಾಗಿಸಲು ಸಮರ್ಪಕ ರಸ್ತೆಯಿಲ್ಲದೇ ಚುನಾಯಿತ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹಾಗಾಗಿ ಸಚಿವ ಕೆ.ಸಿ.ನಾರಾಯಣಗೌಡರು ಕೂಡಲೇ ಈ ಬಗ್ಗೆ ಗಮನಹರಿಸಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚಿಸಿ ಒತ್ತುವರಿಯಾಗಿರುವ ರಸ್ತೆಯನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಹನುಮೇಗೌಡ, ಶಂಕರೇಗೌಡ, ನಂಜಪ್ಪಗೌಡ, ದೇವರಾಜು, ಶೇಖರ, ಶಂಕರಣ್ಣ, ವನಜಾಕ್ಷಮ್ಮ, ಶ್ರೀಕಂಠೇಗೌಡ, ಸುಧಾಕರ, ವಿಜಯ್‍ಕುಮಾರ್, ಸೇರಿದಂತೆ ಹಲವರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!