ಮಂಡ್ಯ: ಅಮೇರಿಕ ಸರ್ಕಾರ ಅಲ್ಲಿನ ಭಾರತೀಯ ವಲಸಿಗರ ಮೇಲೆ ನಡೆಸುತ್ತಿರುವ ಅಮಾನುಷ ಕೃತ್ಯ ಮತ್ತು ದೌರ್ಜನ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನೆಡೆಸಿದರು.
ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು, ಅಮೇರಿಕಾದಲ್ಲಿ ಭಾರತೀಯರನ್ನು ಅಕ್ರಮ ನಿರಾತ್ರಿಶರ ಹೆಸರಿನಲ್ಲಿ ಕೈಗೆ ಕೋಳ ಹಾಕಿ ಕರೆ ತರುವುದನ್ನು ಖಂಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಮಾತನಾಡಿ, ಅಮೇರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ಆರೋಪದಡಿ ಗಡಿ ಪಾರಾಗಿರುವ ಭಾರತೀಯರ ಕೈಗೆ ಕೋಳ ತೊಡಿಸಿ ಕಳಹಿಸುವ ಮೂಲಕ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದರೂ ಕೇಂದ್ರದ ಮೋದಿ ಸರ್ಕಾರ ಕೈ ಕಟ್ಟಿ ಕುಳಿತಿದೆ ಎಂದು ಆಕ್ರೋಶ ಹೊರ ಹಾಕಿದರು.
ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಗಡೆ ಅವರನ್ನು ನಡೆಸಿಕೊಂಡ ರೀತಿಗೆ ಅಂದಿನ ಯುಪಿಎ ಸರ್ಕಾರ ಖಡಕ್ ಸಂದೇಶವನ್ನು ಅಮೆರಿಕಕ್ಕೆ ರವಾನಿಸಿತ್ತು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಸ್ಥಾನಮಾನಕ್ಕಿಂತ ತನ್ನ ವೈಯಕ್ತಿಕ ಪ್ರತಿಷ್ಠೆ ಹೆಚ್ಚು ಮುಖ್ಯವಾಗಿದೆ. ಮೋದಿಯವರು ಈಗಲಾದರೂ ಅನಾಗರಿಕ ನಡವಳಿಕೆ ನಿಲ್ಲಿಸಲು ಟ್ರಂಪ್ ಜೊತೆ ಮಾತಾಡಿ ಭಾರತ ದೇಶದ ವಿಮಾನ ಕಳುಹಿಸಿ ನಾಗರೀಕರನ್ನು ಗೌರವಯುತವಾಗಿ ಕರೆತರಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶೈಲೇಂದ್ರ, ಸಿಎಂ ದ್ಯಾವಪ್ಪ, ಸಾತನೂರು ಕೃಷ್ಣ, ಚಂದಗಾಲು ವಿಜಯಕುಮಾರ್, ಅಜ್ಜಹಳ್ಳಿ ರಾಮಕೃಷ್ಣ, ಜಯರಾಮ್, ಚಿನಕುರಳಿ ರಮೇಶ್, ಅಂಜನಾ,ದ್ಯಾವಣ್ಣ, ಉದಯ್ ಕುಮಾರ್, ಕೆಎಂ ರಾಮಕೃಷ್ಣ,ನಾಗರಾಜು, ನವೀನ್, ಶಕುಂತಲಾ, ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





