Mysore
16
overcast clouds

Social Media

ಬುಧವಾರ, 11 ಫೆಬ್ರವರಿ 2026
Light
Dark

ಕೋಮು ಗಲಭೆ: ಹಲ್ಲೆ ಮಾಡಿ ಮನೆಗಳಿಗೆ ನುಗ್ಗಿ ಬೆದರಿಕೆ ಹಾಕಿದ ಕಿಡಿಗೇಡಿಗಳು

ನಾಗಮಂಗಲ: ಯುವಕನ ಮೇಲೆ ಅನ್ಯ ಕೋಮಿನ ಗುಂಪು ಮಾರಣಾಂತಿಕ ಹಲ್ಲೆ ಮಾಡಿ, ಮನೆಗಳಿಗೆ ನುಗ್ಗಿ ಮಹಿಳೆಯರಿಗೆ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ತಾಲೂಕಿನ ಬೆಳ್ಳೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಬೆಳ್ಳೂರಿನ ಅಭಿಲಾಶ್ ಮೇಲೆ ಮಾರಕಾಸ್ರದಿಂದ ಹಲ್ಲೆ ಮಾಡಿರುವ ಗುಂಪು ಇದೇ ವೇಳೆ ಇತರರ ಮೇಲೆ ಹಲ್ಲೆ ನಡಸಿ ಮನೆಗಳಿಗೆ ನುಗ್ಗಿ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಲ್ಲದೆ ಮಹಿಳೆಯರಿಗೆ ಬೆದರಿಕೆಯೊಡ್ಡಿದೆ. ಸೋಮವಾರ ಸಂಜೆ ಅನ್ಯ ಕೋಮಿನ ಗುಂಪು ದುಷ್ಕೃತ್ಯ ಎಸಗಿದ್ದು, ಇದರಿಂದ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದ್ದು, ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಗಾಯಾಳು ಅಭಿಲಾಶ್‌ನನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳೆದ ಶುಕ್ರವಾರ ಸಂತೆ ಬೀದಿ ರಸ್ತೆಯಲ್ಲಿ ಅಭಿಲಾಶ್, ನಾಗೇಶ್ ಮತ್ತು ಅನ್ಯ ಕೋಮಿನ ಯುವಕರ ನಡುವೆ ಸಣ್ಣ ವಿಚಾರಕ್ಕೆ ಮಾತಿನ ಚಕಮಕಿ ನಡೆದಿತ್ತು. ಮಾರನೇ ದಿನ ಗಂಗಾ ಆರತಿ ಹಬ್ಬ ಆಚರಣೆಯಲ್ಲಿ ನಿರತರಾಗಿದ್ದಾಗ ತಡರಾತ್ರಿ ವೇಳೆ ಅಲ್ಲಿಗೆ ತೆರಳಿದ್ದ ಅನ್ಯ ಕೋಮಿನ ಗುಂಪು ಅವರಿಬ್ಬರನ್ನು ನಾವು ಬಿಡೋದಿಲ್ಲ, ನೀವು ಹಬ್ಬ ಮಾಡಿಕೊಳ್ಳಿ, ನಮ್ಮದು ಮದುವೆ ಇದೆ ಆಮೇಲೆ ಗತಿ ಕಾಣಿಸುತ್ತೇವೆ ಎಂದು ಮಹಿಳೆಯರನ್ನ ಬೆದರಿಸಿತ್ತು, ಇದರಿಂದ ಹೆದರಿದ ನಾಲ್ಕೈದು ಮಹಿಳೆಯರು ಬೆಳ್ಳೂರು ಪೊಲೀಸ್ ಠಾಣೆಗೆ ತೆರಳಿ ವಿಚಾರ ತಿಳಿಸಿ ದೂರು ನೀಡಲು ಮುಂದಾದಾಗ ಪೊಲೀಸರು ಬೆಳಿಗ್ಗೆ ಬನ್ನಿ ಎಂದಿದ್ದರು.

ಮತ್ತೆ ಯಾರು ಇತ್ತ ಸುಳಿಯದ ಹಿನ್ನೆಲೆಯಲ್ಲಿ ತೊಂದರೆ ಇಲ್ಲ ಎಂದು ಮಹಿಳೆಯರು ಸುಮ್ಮನಾಗಿದ್ದರು. ಆದರೆ ಸೋಮವಾರ ಸಂಜೆ ಅನ್ಯ ಕೋಮಿನ ಗುಂಪು ಯುವಕರನ್ನು ಹುಡುಕಾಡಿ ಅಭಿಲಾಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ತಡೆಯಲು ಬಂದವರ ಮೇಲೆ ಹಲ್ಲೆ ನಡೆಸಿ ಮನೆಗಳ ಕಿಟಕಿ ಗಾಜು ಪುಡಿಪುಡಿ ಮಾಡಿ ಮಹಿಳೆಯರಿಗೆ ಜೀವ ಬೆದರಿಕೆ ಹಾಕಿದ್ದಾರೆ. ತಕ್ಷಣ ಸ್ಥಳೀಯರು ಗಾಯಾಳು ಅಭಿಲಾಷ್‌ನನ್ನು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾಂಧಲೆಗೂ ಮುನ್ನ ವಿದ್ಯುತ್ ತೆಗೆದಿರುವುದು ಹಾಗೂ ಹಲ್ಲೆ ಮಾಡಿದ ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿರುವುದು ಪೂರ್ವ ಯೋಜಿತ ಸಂಚು ಎಂದು ಹೇಳಲಾಗಿದೆ.

ಪ್ರಕರಣದ ಹಿನ್ನೆಲೆಯಲ್ಲಿ ಬೆಳ್ಳೂರು ಪಟ್ಟಣದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದ್ದು, ಪಟ್ಟಣದ ಆಯಾ ಕಟ್ಟಿನ ಪ್ರದೇಶ, ಪೊಲೀಸ್ ಠಾಣೆ ಹಾಗೂ ಆದಿಚುಂಚನಗಿರಿ ಆಸ್ಪತ್ರೆ ಬಳಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಬೆಳ್ಳೂರಿಗೆ ಭೇಟಿ ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಬೆಳ್ಳೂರಿನ ಘಟನಾಸ್ಥಳಕ್ಕೆ ಭೇಟಿ ನೀಡಿ ನೊಂದ ಮಹಿಳೆಯರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಮಾಜಿ ಶಾಸಕ ಸುರೇಶ ಗೌಡ ಮಾತನಾಡಿ, ಯುವಕರ ಗುಂಪೊಂದು ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮಹಿಳೆಯರಿಗೆ ಬೆದರಿಕೆ ಹಾಕಿದ್ದಲ್ಲದೆ ಮನೆಗಳಿಗೆ ಹಾನಿ ಮಾಡಿದ್ದಾರೆ, ಘಟನೆ ನಂತರ ಪೊಲೀಸರು ಹಲವರನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರನ್ನೆಲ್ಲ ಬಿಟ್ಟು ಕಳುಹಿಸಿದ್ದಾರೆ, ಇದರ ಹಿನ್ನೆಲೆ ಏನು ಎಂದು ಪ್ರಶ್ನಿಸಿದರು.

ಅಷ್ಟೇ ಅಲ್ಲದೆ ಸಿಸಿಟಿವಿ ಫುಟೇಜ್‌ಗಳನ್ನು ಯಾರೂ ಕೂಡ ನೀಡದಂತೆ ಬೆದರಿಕೆ ಹಾಕಲಾಗಿದೆ, ನಾವು ಯಾರ ಪರವೂ ಅಲ್ಲ, ನ್ಯಾಯದ ಪರ ಆದರೆ ಕಾಂಗ್ರೆಸ್ ಸರ್ಕಾರ ಒಂದು ಧರ್ಮವನ್ನು ಓಲೈಸುವ ರಾಜಕಾರಣ ಮಾಡುತ್ತ ಬೇರೆ ಧರ್ಮೀಯರ ಬಗ್ಗೆ ನಿರ್ಲಕ್ಷ ತೋರಿದೆ ಎಂದು ಆರೋಪಿಸಿದರು. ಬೆಳ್ಳೂರು ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ, ಮುನ್ನೆಚ್ಚರಿಕೆ ವಹಿಸಿದ್ದರೆ ಘಟನೆ ತಡೆಯಬಹುದಾಗಿತ್ತು, ದುಷ್ಕೃತ್ಯ ಮಾಡಿರುವವರನ್ನು ರಕ್ಷಿಸಲು ಮುಂದಾಗಬಾರದು, ಪೊಲೀಸರು ತಾರತಮ್ಯ ಮಾಡದೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಬೆಳ್ಳೂರಿನ ಎಲ್ಲಾ ಧರ್ಮದ ಜನತೆ ಶಾಂತಿ ಕಾಪಾಡಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

Tags:
error: Content is protected !!