ಮಂಡ್ಯ: ಕೆಆರ್ಎಸ್ ಅಣೆಕಟ್ಟೆಯಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದ ಕಾವೇರಿ ನದಿ ತೀರದಲ್ಲಿರುವ ಗೌತಮ ಆಶ್ರಮವು ಜಲಾವೃತಗೊಂಡಿದ್ದು, ಆಶ್ರಮದ ಗಜಾನನ ಸ್ವಾಮೀಜಿಯನ್ನು ರಕ್ಷಣೆ ಮಾಡಲಾಗಿದೆ.
ಕಾವೇರಿ ನದಿಯ ನೀರಿನ ಹೊರಹರಿವು ಹೆಚ್ಚಿದ್ದರಿಂದ ಆಶ್ರಮವು ದ್ವೀಪವಾಗಿ ಮಾರ್ಪಟ್ಟಿದ್ದು, ಸ್ವಾಮೀಜಿ ಸೇರಿದಂತೆ ಇಬ್ಬರನ್ನು ಅಗ್ನಿಶಾಮಕ ತಂಡ, ತುರ್ತು ಸೇವೆ ಇಲಾಖೆ ಹಾಗೂ ಎಮ್ಇಜಿ ತಂಡಗಳು ಸೇರಿ ರಕ್ಷಣೆ ಮಾಡಿ ದಡಕ್ಕೆ ಕರೆತರಲಾಯಿತು.
ಈ ಕಾರ್ಯಚರಣೆಯು ಮೈಸೂರು ವಿಭಾಗದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ ಎಸ್ ಜಯರಾಮ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ ಕೆ ಪಿ, ರಾಘವೇಂದ್ರ ಬಿಎಮ್, ರಮೇಶ್.ಸಿ ಅವರ ನೇತೃತ್ವದಲ್ಲಿ ಸುಮಾರು 25 ಜನ ಸಿಬ್ಬಂದಿಯರಿದ್ದರು.
ಈ ಹಿಂದೆಯು ಸಹ ಆಶ್ರಮವು ಜಲಾವೃತಗೊಂಡಿತ್ತು. ಪ್ರವಾಹ ಬಂದರೂ ಗಜಾನನ ಸ್ವಾಮೀಜಿ ಆಶ್ರಮದಲ್ಲೇ ಉಳಿದುಕೊಂಡಿದ್ದರು. ಬಳಿಕ ಎನ್ಡಿಆರ್ಆಫ್ ಹಾಗೂ ತಾಲೂಕು ಆಡಳಿತ ಸ್ವಾಮೀಜಿಯ ಮನವೊಲಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರ ಮಾಡಲಾಗಿತ್ತು.