Mysore
27
clear sky

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ವಕ್ಫ್‌ ಕಾಯ್ದೆ ತಿದ್ದುಪಡಿ ಮಂಡನೆ : ರೈತರಿಗೆ ದೊರೆತ ಜಯ

ಮಂಡ್ಯ: ರೈತ ವಿರೋಧಿ, ಸಂವಿಧಾನ ವಿರೋಧಿ ವಕ್ಫ್ ಕಾಯಿದೆಯಿಂದ ದೇಶದ ಜನರನ್ನು ರಕ್ಷಿಸಲು ವಕ್ಫ್ ಕಾಯ್ದೆಗೆ ಬಿಲ್ಲನ್ನು ಕೇಂದ್ರ ಸರ್ಕಾರ ಸಂಸತ್ತಿನ ಮಂಡಿಸಿರುವುದು ದೇಶದ ರೈತರಿಗೆ ದೊರೆತ ಜಯವಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ರಮೇಶ್ ರಾಜು ಸಂತಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ರೈತರು ಹಾಗೂ ಸಾರ್ವಜನಿಕರನ್ನು ಪೆಡಂಭೂತದಂತೆ ಕಾಡುತ್ತಿದ್ದ ವಕ್ಫ್‌ಕಾಯ್ದೆಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಸದರಿ ಕಾಯ್ದೆಗೆ ತಿದ್ದುಪಡಿ ತರಲು ಬಿಲ್ಲನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ವಿರೋಧಿಸಿದ್ದು, ಈ ಪಕ್ಷಗಳು ರೈತರ ಪಕ್ಷವಾಗಿರಲು ಸಾಧ್ಯವೇ ಇಲ್ಲ ಎಂದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಕ್ಫ್ ಕಾಯ್ದೆಗೆ ಶಕ್ತಿ ತುಂಬಿಸುವ ನಿಟ್ಟಿನಲ್ಲಿ ಮೂರ್‍ನಾಲ್ಕು ಬಾರಿ ತಿದ್ದುಪಡಿ ತಂದು ಓಟ್ ಬ್ಯಾಂಕ್‌ಗಾಗಿ ಒಂದು ಕೋಮಿಗೆ ದೇಶವನ್ನು ಅಡವಿಟ್ಟು ರೈತರಿಗೆ ದ್ರೋಹ ಬಗೆದಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವೂ ವಕ್ಫ್ ಕಾಯ್ದೆಗೆ ತಿದ್ದುಪಡಿ ತರದಂತೆ ವಿಧಾನ ಮಂಡಲದಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಮುಂದಾಗಿತ್ತು. ರಾಜ್ಯ ಸರ್ಕಾರವೂ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಆದ್ದರಿಂದ ರೈತರು ಜಾಗೃತಗೊಳ್ಳಬೇಕಿದ್ದು, ಇಲ್ಲದಿದ್ದರೆ ರಾಜ್ಯದ ರೈತರಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರವು ಕಳೆದ ೨೦ ತಿಂಗಳಿನಲ್ಲಿ ಗ್ರಾಹಕರಿಗೆ ಹಾಲಿನ ದರ ೯ ರೂ ಹೆಚ್ಚಿಸಿದ್ದು, ರೈತರಿಗೆ ೪ ರೂ. ಕಡಿತಗೊಳಿಸಿ, ಮತ್ತೆ ೪ ರೂ ಹೆಚ್ಚಳ ಮಾಡಿ, ರೈತರಿಗೆ ನೀಡುವುದಾಗಿ ಹೇಳುತ್ತಿದೆ. ರೈತರಿಂದ ಹಾಲನ್ನು ಖರೀದಿಸಿ ಗ್ರಾಹಕರಿಗೆ ತಲುಪಿಸಲು ಆಪರೇಟಿಂಗ್ ಸಿಸ್ಟಮ್‌ನ ವೆಚ್ಚ ಶೇ ೧೦ರಿಂದ ೨೦ ಮಾತ್ರ ತಗುಲಲಿದ್ದು, ಶೇ.೬೫ ರಷ್ಟು ಇಟ್ಟು ರೈತರಿಗೆ ಹಾಲಿನ ದರ ಏರಿಸದೇ ಅನ್ಯಾಯವೆಸಗುತ್ತಿದೆ ಎಂದು ಕಿಡಿಕಾರಿದರು.

ಶಾಸಕರು ಹಾಗೂ ಸಚಿವರ ವೇತನ ಶೇ.೫೦ ರಷ್ಟು ಏರಿಸಿಕೊಂಡಿರುವ ಸರ್ಕಾರ ರೈತರ ಕಬ್ಬಿನ ಎಫ್‌ಆರ್‌ಪಿ ದರ ಏರಿಕೆ ಸಂಬಂಧವಾಗಲೀ, ರೈತರ ಸಮಸ್ಯೆಗಳನ್ನು ಬಗೆರಿಸುವ ಸಂಬಂಧವಾಗಲೀ ಚರ್ಚಿಸದೇ ಇದ್ದು, ರಾಜ್ಯ ಸರ್ಕಾರವೂ ರೈತರ ಪರವಿಲ್ಲ ಎಂದು ದೂಡಿದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಪ್ಪಾಜಿ ಹಳೆಬುದನೂರು, ಶ್ರೀಧರ್, ರುದ್ರಪ್ಪ, ನಾರಾಯಣ ಸ್ವಾಮಿ, ನರೇಶ್ ಇದ್ದರು.

Tags:
error: Content is protected !!