ಮಂಡ್ಯ: ವ್ಯಕ್ತಿಯೋರ್ವ ವಿಚಾರಣೆಗೆಂದು ಬಂದು ಎಎಸ್ಐ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ನಾಗಮಂಗಲ ಗ್ರಾಮಾಂತರ ಎಎಸ್ಐ ರಾಜು ಮಜ್ಜನ ಕೊಪ್ಪಲು ಎಂಬುವವರ ಮೇಳೆ ಪೂಜಾರಿ ಕೃಷ್ಣ ಎಂಬಾತ ಹಲ್ಲೆ ನಡೆಸಿದ್ದಾನೆ.
ಆರೋಪಿ ಕೃಷ್ಣನ ವಿರುದ್ಧ ಆತನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರತಿ ದಿನ ಹಣ ನೀಡುವಂತೆ ಕಿರುಕುಳ ನೀಡುತ್ತಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಹಿನ್ನೆಲೆಯಲ್ಲಿ ಕೃಷ್ಣನನ್ನು ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆತರಲು ಎಎಸ್ಐ ರಾಜು ಹೊರಟಿದ್ದರು. ಈ ವೇಳೆ ನಾಗಮಂಗಲ ಕೋರ್ಟ್ ಬಳಿ ನಿಂತಿದ್ದ ಕೃಷ್ಣನನ್ನು ಎಎಸ್ಐ ಠಾಣೆಗೆ ಕರೆದಿದ್ದಾರೆ. ಠಾಣೆಗೆ ಬರಲು ಕೃಷ್ಣ ಒಪ್ಪಿಲ್ಲ. ಈ ವೇಳೆ ಕೃಷ್ಣನ ಕಾಲರ್ ಹಿಡಿದು ಬಲವಂತವಾಗಿ ಆಟೋಗೆ ಹತ್ತಿಸಲು ಯತ್ನಿಸಿದ್ದಾರೆ. ಈ ವೇಳೆ ಎಎಸ್ಐ ಅವರನ್ನು ತಳ್ಳಿದ ಕೃಷ್ಣ ಹಲ್ಲೆ ನಡೆಸಿದ್ದಾನೆ.
ಘಟನೆ ನಡೆದ ಬಳಿಕ ಆರೋಪಿ ಕೃಷ್ಣನನ್ನು ಬಂಧಿಸಿದ ಪೊಲೀಸರು ಕೋರ್ಟ್ಗೆ ಹಾಜರು ಪಡಿಸಿದ್ದಾರೆ.




