ಮಂಡ್ಯ: ಮೂವತ್ತು ವರ್ಷಗಳ ಬಳಿಕ ಮಂಡ್ಯದಲ್ಲಿ ಡಿಸೆಂಬರ್ ೨೦,೨೧,೨೨ರಂದು ಮೂರು ದಿನಗಳ ಕಾಲ ಜರುಗಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲರ ಸಹಕಾರ, ಬೆಂಬಲ ಅತ್ಯವಶ್ಯಕ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಚಲುವರಾಯಸ್ವಾಮಿ ಹೇಳಿದರು.
ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಮಂಡ್ಯ ಜಿಲ್ಲೆಯ ಸಾಹಿತಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಮಂಡ್ಯದ ಆತಿಥ್ಯ, ಸತ್ಕಾರವನ್ನು ಎಲ್ಲರೂ ನೆನೆಯಬೇಕು. ಆ ನಿಟ್ಟಿನಲ್ಲಿ ಸಮ್ಮೇಳನ ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮಂಡ್ಯಕ್ಕೆ ತನ್ನದೇ ಆದ ಸೊಗಡಿದೆ. ವೈಶಿಷ್ಟ್ಯ ಇದೆ. ನೂರಕ್ಕೆ ನೂರು ಈ ಸಮ್ಮೇಳನ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ಎಲ್ಲರ ಸಲಹೆ, ಮಾರ್ಗದರ್ಶನ, ಅಭಿಪ್ರಾಯ ಪಡೆಯಲಾಗುತ್ತಿದೆ. ಜನಸಾಮಾನ್ಯರಾದಿಯಾಗಿ ಎಲ್ಲರ ಸಲಹೆಗಳನ್ನು ಸ್ವೀಕರಿಸಿ, ಸಮಿತಿಯೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸಾಹಿತ್ಯ ಸಮ್ಮೇಳನದ ಕುರುಹು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಕಲಾಮಂದಿರ ದುರಸ್ತಿ ಕಾರ್ಯ ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ಅಂಬೇಡ್ಕರ್ ಭವನ ರೆಡಿಯಾಗಲಿದೆ. ರೈತ ಭವನಕ್ಕೆ ಚಾಲನೆ ನೀಡಲಾಗಿದೆ.
ಶಿವಪುರ ಧ್ವಜ ಸತ್ಯಾಗ್ರಹ ಪ್ರತಿಷ್ಠಾನ ರಚನೆ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಸ್ಥಾಪನೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇದೆ. ಮೂವತ್ತು ವರ್ಷದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ.ಕೃಷಿ ವಿವಿ, ಸಕ್ಕರೆ ಕಾರ್ಖಾನೆ ಪುನರಾರಂಭಿಸಲಾಗಿದೆ. ನೂತನ ಸಕ್ಕರೆ ಕಾರ್ಖಾನೆ ಬಗ್ಗೆ ಸಂಪುಟದ ಚರ್ಚೆಗೆ ಕಳುಹಿಸಲಾಗಿದೆ. ಅಭಿವೃದ್ಧಿ ನಿರಂತರ, ಸಾಹಿತ್ಯ ಸಮ್ಮೇಳನ ವಿಶೇಷ. ಮೂವತ್ತು ವರ್ಷಗಳ ನಂತರ ನಡೆಯುತ್ತಿರುವ ಈ ಸಮ್ಮೇಳನವನ್ನು ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ನೆರವೇರಿಸಲಾಗುವುದು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕನ್ನಡಿಗರ ಮನ-ಮನೆಗಳ ಹಬ್ಬ: ಜಿಲ್ಲಾಧಿಕಾರಿ ಡಾ. ಕುಮಾರ
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸರ್ಕಾರ, ಜಿಲ್ಲಾಡಳಿತ ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನವಲ್ಲ ಇದು ಎಲ್ಲಾ ಕನ್ನಡಿಗರ ಮನ ಮನೆಯ ಸಮ್ಮೇಳನ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಹೇಳಿದರು.
ಎಲ್ಲಾ ಕನ್ನಡಿಗರ ಮನಸ್ಸುಗಳು ಸೇರಿ ನಾವೆಲ್ಲ ಒಂದು ಎಂಬ ಅಭಿಮಾನ ಮೂಡಿಸಲು ಸರ್ವರ ಸಹಕಾರದ ಅವಶ್ಯಕತೆ ಇದೆ. ಸಮ್ಮೇಳನದಲ್ಲಿ ಸಾಹಿತಿಗಳ ಸಹಕಾರ ಬಹಳ ಮುಖ್ಯ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಸಮ್ಮೇಳನದ ಪ್ರತಿಯೊಂದು ಕೆಲಸದಲ್ಲೂ ಮಾರ್ಗದರ್ಶನ ಸಹಕಾರ ನೀಡುತ್ತಾ ಬಂದಿದ್ದಾರೆ. 28 ಸಮಿತಿಗಳು ಈಗಾಗಲೇ ರಚನೆ ಮಾಡಿಕೊಂಡಿದ್ದು ಎಲ್ಲಾ ಸಮಿತಿಯವರು ಕೂಡ ಸುಮಾರು 5 ರಿಂದ 6 ಭಾರಿ ಸಭೆ ನಡೆಸಿ ಈಗಾಗಲೇ ಕ್ರಿಯಾಯೋಜನೆ ರೂಪಿಸಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆ ಬಿಂಬಿಸಲಿ: ನರಹಳ್ಳಿ ಬಾಲಸುಬ್ರಹ್ಮಣ್ಯ
ಮಂಡ್ಯ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ. ಸಮ್ಮೇಳನದಲ್ಲಿ ಜಿಲ್ಲೆಯ ಸಾಂಸ್ಕೃತಿಕ, ಶ್ರೀಮಂತ ಪರಂಪರೆ ಬಿಂಬಿಸಬೇಕು. ರಾಜ್ಯಮಟ್ಟದಲ್ಲಿ ಮಂಡ್ಯ ಜಿಲ್ಲೆ ಪ್ರತಿನಿಧಿಸಬೇಕು ಎಂದು ಬಹುಮುಖಿ ಚಿಂತಕರು, ಬರಹಗಾರರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ಯಕ್ಷಗಾನ ಕಲೆಯ ಮೂಲ ಮಂಡ್ಯ. ಯಕ್ಷಗಾನದ ತವರು ಮಂಡ್ಯ. ಕೆಂಪಣ್ಣಗೌಡ ಮೊದಲ ಕವಿ. ಮೂಡಲಪಾಯ ಕಲೆ ಮತ್ತೆ ಬೆಳಕಿಗೆ ಬರಬೇಕು. ಮಂಡ್ಯ ಜಿಲ್ಲೆಯ ಕೊಡುಗೆಗಳನ್ನು ಕೇಂದ್ರವಾಗಿಟ್ಟುಕೊಂಡು ಚರ್ಚೆಯಾಗಬೇಕು. ರಾಜ್ಯಮಟ್ಟದ ವಿದ್ವಾಂಸರನ್ನು ಕರೆಸಬೇಕು ಎಂದು ಸಲಹೆ ನೀಡಿದರು.
ಕೃಷಿ ಸಂಸ್ಕೃತಿಗೆ ಮಂಡ್ಯ ಕೊಡುಗೆ ಅಪಾರ. ನೇಗಿಲಯೋಗಿ ಪರಿಕಲ್ಪನೆ ಚರ್ಚೆಯಾಗಬೇಕು. ಸಮ್ಮೇಳನಕ್ಕೆ ಘನತೆಯೇ ಗೋಷ್ಠಿ. ಗೋಷ್ಠಿ ಬಗ್ಗೆ ಚರ್ಚೆ ಆಗಬೇಕು. ಸಾಹಿತ್ಯ, ಕೃಷಿ, ಸಂಸ್ಕೃತಿ ಮತ್ತು ಜಾನಪದ ಗೋಷ್ಠಿಯಾಗಬೇಕು. ಅನುವಾದ ಗೋಷ್ಠಿ ಆರಂಭಿಸುವ ಮೂಲಕ ಅನುವಾದ ಗೋಷ್ಠಿ ಮೊದಲು ಮಾಡಿದ ಕೀರ್ತಿ ಮಂಡ್ಯ ಸಮ್ಮೇಳನಕ್ಕೆ ಸಲ್ಲಬೇಕು ಎಂದರು.
ಜಿಲ್ಲೆಯ ಸಾಹಿತಿಗಳನ್ನೆಲ್ಲಾ ಆಹ್ವಾನಿಸಿ ಸಮಾಲೋಚನಾ ಸಭೆ ಆಯೋಜನೆಗೆ ಕಾರಣರಾದ ಶಾಸಕ ದಿನೇಶ್ ಗೂಳಿಗೌಡ ಅವರಿಗೆ ಅಭಿನಂದನೆಗಳು. ಸಾಹಿತ್ಯ ಸಮ್ಮೇಳನದ ನೆನಪು ಉಳಿಯುವ ಕಾರ್ಯ ಆಗಬೇಕು ಎಂದು ಕನ್ನಡ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಗೌಡ ಅವರು ಹೇಳಿದರು.
ಮಂಡ್ಯ ಮಾದರಿ ಇಟ್ಟುಕೊಂಡು ಸಮ್ಮೇಳನ ಆಯೋಜಿಸಲಿ. ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕು. ಜಿ.ನಾರಾಯಣ್, ಶಂಕರೇಗೌಡ್ರು, ಸಾಹುಕಾರ್ ಚೆನ್ನಾಯ್ಯ, ಶೀಂಕಠೇಗೌಡ್ರ ಹೆಸರನ್ನು ಮಹಾದ್ವಾರಗಳಿಗೆ ಇಡಬೇಕು. ಜಿಲ್ಲೆಯ ಮಹನೀಯರನ್ನು ನೆನೆಯಬೇಕು ಎಂದು ಹೇಳಿದರು.
ಸಭೆಯಲ್ಲಿ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮಹೇಶ್ ಜೋಷಿ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾದ ಮೀರಾ ಶಿವಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಕೃಷ್ಣೇಗೌಡ ಹುಸ್ಕೂರು, ವಿ ಹರ್ಷ ಸೇರಿದಂತೆ ಇನ್ನಿತರರ ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು.





