Mysore
24
scattered clouds
Light
Dark

ಗ್ಯಾರಂಟಿ ಯೋಜನೆ ಮೂಲಕ ಪ್ರತಿ ಮನೆಗೆ 5000 ರೂ: ಎನ್ ಚಲುವರಾಯಸ್ವಾಮಿ

ಮಂಡ್ಯ: ಐದು ಗ್ಯಾರಂಟಿಗಳಾದ ಶಕ್ತಿ ಯೋಜನೆ, ಯುವನಿಧಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ರೂ. 5000 ಹಣ ತಲುಪುತ್ತಿದೆ ಎಂದು ‌ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.

ಶನಿವಾರ(ಜು.6) ಕೆರೆಗೋಡಿನಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳ ಅನುಷ್ಠಾನ ಕುರಿತಂತೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ನಿರ್ವಹಿಸುತ್ತಿತ್ತು, ರಾಜ್ಯದಲ್ಲಿ ಬಹುತೇಕ ಫಲನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳು ತಲುಪಿದೆ ಎಂದರು.

ಪಂಚ ಗ್ಯಾರಂಟಿಗಳ ಜೊತೆ ಅಭಿವೃದ್ಧಿ ಕಾಮಗಾರಿಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಕೃಷಿ ಇಲಾಖೆಯಿಂದ ನೀಡುವ ಸಬ್ಸಿಡಿಗಳು, ಬಿತ್ತನೆ ಬೀಜ, ರಸಗೊಬ್ಬರ, ಸೇರಿದಂತೆ ವಿವಿಧ ಇಲಾಖೆಯಿಂದ ನೀಡಲಾಗುತ್ತಿರುವ ಸವಲತ್ತು ನಿಲ್ಲಿಸಿಲ್ಲ ಎಂದರು.

ಬೆಳೆವಿಮೆ ರೈತರಿಗೆ 1,700 ಕೋಟಿ ರೂ ಪಾವತಿ

ಬೆಳೆ ವಿಮೆ ಯೋಜನೆಯಡಿ ರೈತರಿಗೆ 1,700 ಕೋಟಿ ರೂ ಪಾವತಿಸಲಾಗಿದೆ. ಈ ವರ್ಷ ಮುಂಗಾರು ಬೆಳೆಗೆ ಯಾವುದೇ ತೊಂದರೆ ಇಲ್ಲದಂತೆ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಪ್ರತಿ ತಾಲೂಕಿನಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಕೊರತೆ ಇಲ್ಲದಂತೆ ಸೌಲಭ್ಯ ಹಾಗೂ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ‌ ಸರ್ಕಾರ ಹಾಗೂ ಇಲಾಖೆಯು ಎಲ್ಲಾ ಸೌಲಭ್ಯಗಳನ್ನು ರೈತರಿಗೆ ತಲುಪಿಸುತಿದ್ದೇವೆ. ನಮ್ಮ ಸರ್ಕಾರ ಯಾವಾಗಲು ರೈತರ ಪರ ಇರುತ್ತದೆ ಎಂದು ಹೇಳಿದರು.

ಮಂಡ್ಯದ ಕೆರಗೋಡಿನಿಂದ ಕುಣಿಗಲ್ ಕಡೆ ಹೋಗುವ ರಸ್ತೆ ಹಾಗೂ ಚಿಕ್ಕಮಂಡ್ಯದ ಕಾರೆಮನೆ ಗೇಟ್ ಬಳಿ ರಸ್ತೆಯನ್ನು ಅಭಿವೃದ್ದಿ ಮಾಡಲಾಗಿದೆ. ಮಂಡ್ಯ ಜಿಲ್ಲೆಯು ಕೃಷಿ ಪ್ರಧಾನವಾದ ರೈತರ ಜಿಲ್ಲೆಯಾಗಿದ್ದು, ಮಂಡ್ಯದಲ್ಲಿ ಕೃಷಿ ವಿಶ್ವ ವಿದ್ಯಾನಿಲಯವನ್ನು ಆದಷ್ಟು ಬೇಗ ಸ್ಥಾಪಿಸಲಾಗುವುದು. ಜೊತೆಗೆ ಹೊಸ ಶುಗರ್ ಫ್ಯಾಕ್ಟರಿಯನ್ನು ಜಿಲ್ಲೆಯಲ್ಲಿ ನಿರ್ಮಿಸಲಾಗುವುದು ಎಂದರು.

ಜಿಲ್ಲೆಯ ಕೊನೆಯ ಭಾಗದ ಬೆಳೆಗಳಿಗೂ ನೀರು ತಲುಪಿಸುವ ಉದ್ದೇಶದಿಂದ ವಿ.ಸಿ.ನಾಲೆ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಜೂನ್ 8 ರಿಂದ ಮೊದಲು ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ನಾಲೆಗಳಿಗೆ ನೀರು ಒದಗಿಸಲಾಗಿವುದು ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಭಾಗದ 27,000 ಆಸ್ತಿಗಳಿಗೆ ಈ ಸ್ವತ್ತು ಮಾಡುವ ಕೆಲಸ ನಿರ್ವಹಿಸಿರುತ್ತಾರೆ. ಮೊದಲು ವರ್ಷಕ್ಕೆ 500 ರಿಂದ 1000 ಮಾತ್ರ ಮಾಡುತ್ತಿದ್ದರು, ಈಗ 27000 ಮಾಡಿರುವುದು ಉತ್ತಮ ಸಾಧನೆಯಾಗಿದೆ ಎಂದು ಹೇಳಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ ರವಿಕುಮಾರ್ ಅವರು ಜಿಲ್ಲೆಯ ಕೇಂದ್ರ ಸ್ಥಾನದಲ್ಲಿದ್ದಾರೆ. ಇವರು ಜಿಲ್ಲೆಯ ಯುವಕರು, ಮಹಿಳೆಯರು, ಜನಸಾಮಾನ್ಯರ ಸಂಪರ್ಕದಲ್ಲಿದ್ದುಕೊಂಡು ಸರ್ಕಾರದ ಸಹಕಾರದೊಂದಿಗೆ ಮಂಡ್ಯ ಕ್ಷೇತ್ರದಲ್ಲಿ ಉತ್ತಮ ಬದಲಾವಣೆಯನ್ನು ತರಲು ಸಚಿವರು ಶ್ರಮಿಸುತ್ತಿದ್ದಾರೆ. ಅವರಿಗೆ ನಿಮ್ಮೆಲ್ಲರ ಸಹಕಾರ, ಪ್ರೀತಿ, ವಿಶ್ವಾಸ ಮುಖ್ಯವಾಗಿದೆ ಎಂದರು.

ಜನಸಾಮಾನ್ಯರು ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಸುವ ಅರ್ಜಿಗಳ ಮೇಲೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬರೆದು ಸಲ್ಲಿಸಿ. ಯಾವುದಾದರೂ ಕಾನೂನು ಬಾಹಿರವಾಗುವ ಅರ್ಜಿಯನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ, ಒಂದು ತಿಂಗಳೊಳಗೆ ನಿಮ್ಮ ಸಮಸ್ಯೆಯನ್ನು ಪರಿಹರಿಸುವ ಕೆಲಸವನ್ನು ಮಾಡಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳಿದ್ದು, ನಿಮ್ಮ ಸಮಸ್ಯೆಯನ್ನು ಪರಿಹರಿಸಲು ವಿಶೇಷ ಪಾತ್ರ ವಹಿಸುತ್ತಾರೆ. ದಯಮಾಡಿ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನ್ಯಾಯಾಲಯದಲ್ಲಿದ್ದ ಸುಮಾರು 10,600 ಪ್ರಕರಣಗಳಲ್ಲಿ 1,300 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದರು.

ಮಂಡ್ಯ ಶಾಸಕರಾದ ಪಿ ರವಿಕುಮಾರ್ ಅವರು ಮಾತನಾಡಿ, ಕೆರಗೋಡಿನಲ್ಲಿರುವ ಪಂಚಲಿಂಗೇಶ್ವರ ಸಮುದಾಯ ಭವನದ ನಿರ್ಮಾಣವೂ ಬಹಳ ವರ್ಷಗಳಿಂದ ಅರ್ಧಕ್ಕೆ ನಿಂತಿದ್ದು, ಶೀಘ್ರದಲ್ಲೇ ಅದನ್ನು ಪೂರ್ಣಗೊಳಿಸಲಾಗುವುದು. ಜೊತೆಗೆ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಸರ್ಕಾರವು ಅನುದಾನ ನೀಡಲಿದ್ದು ಶೀಘ್ರದಲ್ಲೇ ನಿರ್ಮಿಸಲಾಗುವುದು ಎಂದರು.

5 ಕೋಟಿ ರೂ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿಯ ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಕೆರೆಯ ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು. ಕೆರಗೋಡಿನಲ್ಲಿ ಬಸ್ ನಿಲ್ದಾಣವನ್ನು ಕಟ್ಟಲು ಸದ್ಯಕ್ಕೆ ಸ್ಥಳದ ಕೊರತೆ ಇದೆ. ಸ್ಥಳದ ಹುಡುಕಾಟ ನಡೆಯುತ್ತಿದ್ದು, ಸ್ಥಳವು ನಿಗಧಿಯಾದ ತಕ್ಷಣ ಬಸ್ ನಿಲ್ದಾಣವನ್ನು ಕಟ್ಟಲಾಗುವುದು ಎಂದು ಹೇಳಿದರು.

ವಸತಿರಹಿತರ ಅತೀ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದ್ದು, 50 ಸೈಟುಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ 5 ಎಕರೆ ಸರ್ಕಾರಿ ಜಾಗವನ್ನು ಹುಡುಕಿ ಕೆರಗೋಡು ಪಂಚಾಯಿತಿಯಡಿಯಲ್ಲಿ ಬರುವ ವಸತಿ ಹಾಗೂ ನಿವೇಶನ ರಹಿತರಿಗೆ ಸರ್ಕಾರದ ವತಿಯಿಂದ ಸೈಟುಗಳನ್ನು ನೀಡಲಾಗುವುದು ಎಂದರು.

ಈ ಹಿಂದೆ ಬಸರಾಳು ಮತ್ತು ಕೀಲಾರದಲ್ಲಿ ನಡೆದ ಜನಸ್ಪಂದನದಲ್ಲಿ ಬಂದಂತಹ ಶೇ. 95 ರಷ್ಟು ಅರ್ಜಿಗಳನ್ನು ಕೇವಲ 1 ತಿಂಗಳೊಳಗೆ ವಿಲೇವಾರಿ ಮಾಡಲಾಗಿದೆ. ಹಾಗೆಯೇ ಈ ಕಾರ್ಯಕ್ರಮದಲ್ಲೂ ಬರುವ ಅರ್ಜಿಗಳನ್ನು ಪಡೆದು ನಿಮ್ಮ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.