Mysore
28
light rain

Social Media

ಗುರುವಾರ, 11 ಜೂನ್ 2026
Light
Dark

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ 11ನೇ ನೀತಿ ಆಯೋಗದ ಸಭೆ

ಕರ್ನಾಟಕ ಸಿಎಂ ಡಿಕೆಶಿ ಸೇರಿ ಹಲವು ರಾಜ್ಯಗಳ ಸಿಎಂಗಳು ಭಾಗಿ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿನ ರಾಷ್ಟ್ರಪತಿ ಭವನ ಸಾಂಸ್ಕೃತಿಕ ಕೇಂದ್ರದಲ್ಲಿಂದು 11ನೇ ನೀತಿ ಆಯೋಗ ಆಡಳಿತ ಮಂಡಳಿ ಸಭೆ ನಡೆಯಿತು.

ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿಗಳಾದ ಕರ್ನಾಟಕದ ಡಿ.ಕೆ.ಶಿವಕುಮಾರ್, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ, ಬಿಹಾರದ ಸಾಮ್ರಾಟ್ ಚೌಧರಿ, ದಿಲ್ಲಿಯ ರೇಖಾ ಗುಪ್ತಾ, ಹರಿಯಾಣ ನಯಾಬ್ ಸಿಂಗ್ ಸೈನಿ, ಪಶ್ಚಿಮ ಬಂಗಾಳ ಸುವೇಂದು ಅಧಿಕಾರಿ, ತಮಿಳುನಾಡಿನ ಸಿ.ಜೋಸೆಫ್ ವಿಜಯ್, ಕೇರಳದ ವಿ.ಡಿ.ಸತೀಶನ್ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಆಡಳಿತಾಧಿಕಾರಿಗಳು, ನೀತಿ ಆಯೋಗದ ಉಪಾಧ್ಯಕ್ಷರು, ಸದಸ್ಯರು ಮತ್ತು ನಾಯಕರು ಸಭೆಯಲ್ಲಿ ಹಾಜರಿದ್ದರು.

ಈ ವರ್ಷ ನೀತಿ ಆಯೋಗದ ಸಭೆಯು ವಿಕಸಿತ ಭಾರತ 2047ಕ್ಕೆ ಸಮಗ್ರ ಮಾನವ ಅಭಿವೃದ್ಧಿ ಧ್ಯೇಯದ ಮೇಲೆ ನಡೆದಿದೆ. ಇದು ವಯಸ್ಸು, ಪ್ರದೇಶ, ಲಿಂಗ ಅಥವಾ ಸಾಮಾಜಿಕ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲಾ ನಾಗರಿಕರ ಯೋಗಕ್ಷೇಮ ಮತ್ತು ಅಭಿವೃದ್ಧಿಗೆ ಒತ್ತು ನೀಡುತ್ತದೆ.

ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ದೇಶಾದ್ಯಂತ ಉದ್ಯಮಶೀಲತೆ, ಕೌಶಲಾಭಿವೃದ್ಧಿ ಮತ್ತು ಸುಸ್ಥಿರ ಉದ್ಯೋಗಾವಕಾಶ ಸೃಷ್ಟಿಗೆ ಉತ್ತೇಜಿಸಿ ಚರ್ಚೆ ನಡೆಸಲಿದ್ದಾರೆ.

ಸಮಗ್ರ ಮಾನವ ಅಭಿವೃದ್ಧಿ ಚೌಕಟ್ಟು ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ಆಧರಿತವಾಗಿದೆ. ಅವು ಮೂಲಭೂತ ಮಾನವ ಬಂಡವಾಳ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಕೌಶಲ್ಯಗಳು, ಉತ್ಪಾದಕ ಉದ್ಯೋಗ, ಉದ್ಯಮಶೀಲತೆ ಮತ್ತು ವಿಕೇಂದ್ರೀಕೃತ ಬೆಳವಣಿಗೆ, ಆರೋಗ್ಯ, ಪೋಷಣೆ ಮತ್ತು ಯೋಗಕ್ಷೇಮ ಮತ್ತು ಎಲ್ಲರಿಗೂ ಸಮಾನತೆ ಮತ್ತು ಘನತೆ ಎಂಬುದಾಗಿದೆ.

ಏನೆಲ್ಲಾ ಚರ್ಚೆ?
ಆಡಳಿತ, ಡಿಜಿಟಲ್ ಸಾರ್ವಜನಿಕ ಸೌಕರ್ಯ, ಪಾಲುದಾರಿಕೆಗಳು ಮತ್ತು ಡೇಟಾ ಚಾಲಿತ ವ್ಯವಸ್ಥೆಗಳು, ಅಲ್ಪ, ಮಧ್ಯಮ ಮತ್ತು ದೀರ್ಘಾವಧಿಯ ಫಲಿತಾಂಶ, ಸಮಾನ ಮತ್ತು ಸುಸ್ಥಿರ ಬೆಳವಣಿಗೆಯ ಕಡೆಗೆ ಏಕೀಕೃತ ಮತ್ತು ಸಹಯೋಗದ ವಿಧಾನವನ್ನು ಬಲಪಡಿಸುವ ಕುರಿತು ಚರ್ಚಿಸಲಾಯಿತು. ಜೊತೆಗೆ ನೀತಿ ಆಯೋಗದ ಆಡಳಿತ ಮಂಡಳಿಯು 2025ರ ಡಿಸೆಂಬರ್ 26 ರಿಂದ 28 ರವರೆಗೆ ನಡೆದ 5ನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದ ಶಿಫಾರಸುಗಳ ಮೇಲೂ ಗಮನ ಹರಿಸಿತು ಎಂದು ಮೂಲಗಳು ತಿಳಿಸಿವೆ.

Tags:
error: Content is protected !!