Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಸ್ವಯಂ ಉದ್ಯೋಗ ಸಾಲಕ್ಕಾಗಿ ಮೊದಲ ದಿನವೇ ನೂರಾರು ಬ್ರಾಹ್ಮಣರಿಂದ ಅರ್ಜಿ ಸಲ್ಲಿಕೆ

1 ಲಕ್ಷ ರೂ ಸ್ವಯಂ ಉದ್ಯೋಗ ಸಾಲಕ್ಕಾಗಿ ಮೊದಲ ದಿನವೇ ನೂರಾರು ಬ್ರಾಹ್ಮಣರಿಂದ ಅರ್ಜಿಸಲ್ಲಿಕೆ

ಅರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ಮೋದಿ ಕೊಡುಗೆ : ಕೆ.ಎಂ. ನಿಶಾಂತ್

ಮೈಸೂರು : ನಗರದ ವಿಪ್ರಸಹಾಯವಾಣಿ ಹಾಗು ಕೆ.ಎಂ. ನಿಶಾಂತ್ ರವರ ಜನ ಸೇವಾ ಕೇಂದ್ರದ ವತಿಯಿಂದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಘೋಷಿಸಿರುವ ‘ಪುರುಷೋತ್ತ ಸ್ವಯಂ ಉದ್ಯೋಗ ಸಾಲ’ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ನಗರದ ರಾಮಾನುಜ ರಸ್ತೆಯಲ್ಲಿರುವ ಜನ ಸೇವಾ ಕೇಂದ್ರದಲ್ಲಿ ಚಾಲನೆ ನೀಡಲಾಯಿತು. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಎಂ ಆರ್ ಬಾಲಕೃಷ್ಣ ಅರ್ಜಿದಾರರಿಂದ ಅರ್ಜಿ ಸ್ವೀಕರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಜನ ಸೇವಾ ಕೇಂದ್ರದ ಸಂಸ್ಥಾಪಕ ಕೆ.ಎಂ. ನಿಶಾಂತ್ ರವರು ಆರ್ಥಿಕವಾಗಿ ಹಿಂದುಳಿದ ನಿರುದ್ಯೋಗಿ ಬ್ರಾಹ್ಮಣರನ್ನು ಆರ್ಥಿಕವಾಗಿ ಪುನಶ್ಚೇತನ ಗೊಳಿಸಿ, ಸ್ವಯಂ ಉದ್ಯೋಗಸ್ಥರನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಂಡಿದೆ. ಹಲವಾರು ವರ್ಷಗಳಿಂದ ಬ್ರಾಹ್ಮಣರಿಗೆ ಸರ್ಕಾರದ ಯಾವುದೇ ಯೋಜನೆಗಳು ಇಲ್ಲದಿದ್ದ ಕಾರಣ ಯೋಜನೆಗೆ ಬೇಕಿರುವ ದಾಖಲೆಗಳು, ಪ್ರಕ್ರಿಯೆಗಳ ಬಗ್ಗೆ ಹಲವರಿಗೆ ಅರಿವಿಲ್ಲ ಮತ್ತು ಯೋಜನೆಯ ಮಾಹಿತಿ ಸಾಕಷ್ಟು ಜನರಿಗೆ ತಲುಪಿಲ್ಲ ಹಾಗಾಗಿ ವಿಪ್ರ ಸಹಾಯವಾಣಿ ಹಾಗು ನಮ್ಮ ಜನ ಸೇವಾ ಕೇಂದ್ರದ ಮೂಲಕ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಬೇಕಿರುವ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಲು ಸಹಕಾರ ನೀಡುತ್ತಿದ್ದೇವೆ. ಈಗಾಗಲೆ ನೂರಾರು ವಿಪ್ರ ವಿದ್ಯಾರ್ಥಿಗಳಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೀಡುವ ವಿದ್ಯಾರ್ಥಿವೇತನ ಹಾಗು ಸಹಾಯ ಧನವನ್ನು ಕೊಡಿಸಲಾಗಿದೆ, ಈ ಯೋಜ‌ನೆಗೂ ಉತ್ತಮ ಪ್ರತಿಕ್ರಿಯ ದೊರಕಿದ್ದು ಮೊದಲ ದಿನವಾದ ಇಂದು ಸುಮಾರು 160 ಜನರಗೆ ಅರ್ಜಿ ವಿತರಿಸಲಾಗಿದೆ ಮುಂದಿನ ಒಂದು ತಿಂಗಳ ಒಳಗಾಗಿ 500 ಜನ ಹಿಂದುಳಿದ ಬ್ರಾಹ್ಮಣಗೆ ಈ ಯೋಜನೆಯ ಮೂಲಕ ಸಾಲ ಒದುಗಿಸಿ ಅವರನ್ನು ಸ್ವಯಂ ಉದ್ಯೋಗಸ್ಥರನ್ನಾಗಿಸುವ ಗುರಿಯನ್ನು ಹೊಂದಿದ್ದೇವೆ. ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ಶೇಕಡ 10ರಷ್ಟು ಮೀಸಲಾತಿ ನೀಡಿರುವುದರಿಂದಾಗಿ ಇಂತಹ ಯೋಜನೆಗಳು ಬ್ರಹ್ಮಣ ಸಮುದಾಯಕ್ಕೆ ದೊರಕುತ್ತಿದೆ ಹಾಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರಿಗೆ ಸಮುದಾಯ ಕೃತಜ್ಞವಾಗಿದೆ ಎಂದು ತಿಳಿಸಿದರು. ನಂತರ ಮಾತನಾಡಿದ ವಿಪ್ರ ಸಹಾಯ ವಾಣಿಯ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್  ಬ್ರಾಹ್ಮಣರು ಉಪಜಾತಿಗಳ ಮೇಲೆ ಹೆಚ್ಚು ಅಭಿಮಾನ ಹೊಂದಿರುವ ಪರಿಣಾಮ ಜನಗಣತಿ ವೇಳೆ ಬ್ರಾಹ್ಮಣ ಎಂದು ಜಾತಿ ನಮೂದಿಸುತ್ತಿಲ್ಲ .

ಇದರಿಂದ ರಾಜ್ಯದಲ್ಲಿ ಕೇವಲ 17ಲಕ್ಷ ಬ್ರಾಹ್ಮಣರಿದ್ದಾರೆ ಎಂದು ಸರ್ಕಾರದ ದಾಖಲೆಗಳಲ್ಲಿ ದಾಖಲಾಗಿವೆ. ಇದರಿಂದ ನಿರೀಕ್ಷಿತ ಪ್ರತಿನಿದ್ಯ ಸಮುದಾಯಕ್ಕೆ ಸಿಗುತ್ತಿಲ್ಲ. ಹೀಗಾಗಿ 45ಕ್ಕೂ ಹೆಚ್ಚು ಉಪ ಜಾತಿಗಳು ಒಗ್ಗಟ್ಟಾಗಿ ತಾವು ಬ್ರಾಹ್ಮಣರು ಎಂದು ದಾಖಲಿಸಬೇಕು ಆಗಮಾತ್ರ ಈ ರೀತಿಯ ಯೋಜನೆಗಳನ್ನು, ಹಾಗು ಹೆಚ್ಚಿನ ಅನುದಾನವನ್ನು ಸಮುದಾಯ ಪಡೆಯಲು ಸಾಧ್ಯ ಎಂದರು. ಹಾಗೂ ಈ ಯೋಜನೆಯ ಮೂಲಕ 1ಲಕ್ಷ ರೂ ಸಬ್ಸಿಡಿ ಸಾಲ ದೊರಕುತ್ತಿದ್ದು 20 ಸಾವಿರ ರೂಗಳನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುವುದು. ಉಳಿದ 80 ಸಾವಿರವನ್ನು ಸಾಲದ ರೂಪದಲ್ಲಿ ಕೆನರಾ ಬ್ಯಾಂಕ್ ನ ಮೂಲಕ ಕೊಡಿಸಲಾಗುತ್ತದೆ, ಅರ್ಜಿ ಸಲ್ಲಿಸಲು ಇ ಡಬ್ಲು ಎಸ್ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವ ಚಿತ್ರ, ಕೆನರಾ ಬ್ಯಾಂಕ್ ನ ಪಾಸ್ ಪುಸ್ತಕ, ಪ್ಯಾನ್ ಕಾರ್ಡ್ ಹಾಗು ಪ್ರಾಜೆಕ್ಟ್ ರಿಪೋರ್ಟ್ ಅನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ, ಅರ್ಜಿಯೊಂದಿಗೆ ಈ ಮೇಲಿನ ಎಲ್ಲಾ ಧಾಖಲೆಗಳನ್ನು ಲಗತ್ತಿಸಿ ಕಚೇರಿಯಲ್ಲಿ ಸಲ್ಲಿಸ ಬಹುದು ಹಾಗು ಹೆಚ್ಚಿನ ಮಾಹಿತಿಗಾಗಿ ನಗರದ ರಾಮಾನುಜ ರಸ್ತೆಯಲ್ಲಿರುವ ಜನ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ವಿಪ್ರ ಸಹಾಯ ವಾಣಿಯ ವಿಕ್ರಂ ಅಯ್ಯಂಗಾರ್, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಕೆ.ಎಂ. ನಿಶಾಂತ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಎಂ.ಆರ್ ಬಾಲಕೃಷ್ಣ, ಸಿ.ವಿ. ಪಾರ್ಥಸಾರಥಿ, ಕೆ.ಪಿ. ಮಧುಸೂದನ್, ಸತೀಶ್, ಸಂಪತ್, ಮದ್ವೇಶ್ ಮನ್ನಾರಿ, ಜಗದೀಶ್, ಎಂ.ಎನ್. ಧನುಷ್, ನವೀನ್, ವಿಜಯ್ ಕುಮಾರ್, ನಾಗೇಂದ್ರ ಹಾಗು ಹಲವು ಫಲಾನುಭವಿಗಳು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!