ಕೊಡಗು: ತುಂಬು ಗರ್ಭಿಣಿಯೊಬ್ಬರು ಪ್ರಸವಕ್ಕಾಗಿ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಸಂದರ್ಭ ಮಾರ್ಗಮಧ್ಯದಲ್ಲಿಯೇ ಅಂಬುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ವರದಿಯಾಗಿದೆ.
ವಿರಾಜಪೇಟೆ ಹೊರವಲಯದ ಕಂಡಂಗಾಲ ಗ್ರಾಮದ ಸಂತೋಷ್ ಅವರ ತೋಟದ ಲೈನ್ ಮನೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರಾಗಿರುವ ಕಲಾಕ್ ಹಾಗೂ ಅವರ ತುಂಬು ಗರ್ಭಿಣಿ ಪತ್ನಿ ಶಾರ್ಜಾನ್ (22) ವಾಸವಾಗಿದ್ದಾರೆ.
ಇಂದು ರಾತ್ರಿ ಎಂಟು ಗಂಟೆಗೆ ಶಾರ್ಜಾನ್ ಅವರಿಗೆ ಜೋರಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ತೋಟದ ಮಾಲಿಕ ಸಂತೋಷ್ ಅವರು ವಿರಾಜಪೇಟೆ ಖಾಸಗಿ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.
ಸಂತೋಷರವರ ಸೂಚನೆಯಂತೆ ಕಂಡಂಗಾಲಕ್ಕೆ ತೆರಳಿದ ವಿರಾಜಪೇಟೆ ಅಂಬುಲೆನ್ಸ್ ಚಾಲಕ ಶೈಜು, ಶಾರ್ಜಾನ್ ಅವರನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತರುತ್ತಿದ್ದ ಸಂದರ್ಭ ಮಾರ್ಗದಲ್ಲೆ ಶಾರ್ಜಾನ್ ಅವರಿಗೆ ಪ್ರಸವ ಸಂಭವಿಸಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ನಂತರ, ಆಂಬುಲೆನ್ಸ್ ಚಾಲಕ ಶಾರ್ಜಾನ್ ಹಾಗೂ ನವಜಾತ ಶಿಶುವನ್ನು ಸುರಕ್ಷಿತವಾಗಿ ವಿರಾಜಪೇಟೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದು, ತಾಯಿ ಮತ್ತು ಮಗು ಅರೋಗ್ಯವಾಗಿದ್ದಾರೆ. ಅಲ್ಲದೇ, ಚಾಲಕ ಶೈಜು ಅವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.





