ಮಡಿಕೇರಿ: ಪತ್ನಿಯನ್ನು ಬರ್ಬರವಾಗಿ ಗುಂಡಿಕ್ಕಿ ಹತ್ಯೆ ಮಾಡಿ ಪತಿ ಪೊಲೀಸರಿಗೆ ಶರಣಾದ ಘಟನೆ ವಿರಾಜಪೇಟೆ ಹೊರವಲಯದ ಬೇಟೋಳಿ ಗ್ರಾಮದಲ್ಲಿ ಜರುಗಿದೆ.
ಶಿಲ್ಪ ಸೀತಮ್ಮ (36)ಮೃತಪಟ್ಟ ಮಹಿಳೆ. ನಾಯಕಂಡ ಬೋಪಣ್ಣ (45)ಹತ್ಯೆ ಬಳಿಕ ಪೊಲೀಸರಿಗೆ ಶರಣಾದ ಆರೋಪಿ.
ನಿನ್ನೆ(ಜು.19) ರಾತ್ರಿ ಶಿಲ್ಪ ಸೀತಮ್ಮ ಬೇರೊಬ್ಬರ ದೂರವಾಣಿ ಕರೆ ಸ್ವೀಕರಿಸಿ ಮಾತನಾಡಿದ್ದರು. ಇದನ್ನು ಆಕ್ಷೇಪಿಸಿದ ಪತಿ ನಾಯಕಂಡ ಬೋಪಣ್ಣ, ಈ ವಿಚಾರವಾಗಿ ರಾತ್ರಿಯೆಲ್ಲ ಜಗಳ ನಡೆಸಿ ಇಂದು(ಜು.20) ಬೆಳಗ್ಗೆ ಗುಂಡಿಕ್ಕಿ ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.
ಶಿಲ್ಪ ಸೀತಮ್ಮ 2012 ರಿಂದ 2017 ರವರೆಗೆ ಬೇಟೋಳಿ ಗ್ರಾಮ ಪಂಚಾಯತಿ ಸದಸ್ಯರಾಗಿದ್ದರು. ಹತ್ಯೆ ಬಳಿಕ ಆರೋಪಿ ಬೋಪಣ್ಣ ಪೊಲೀಸ್ ಠಾಣೆಗೆ ಕೋವಿಯೊಂದಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ವಿರಾಜಪೇಟೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





