Mysore
26
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಮಡೀಕೆರಿ | ಮುಕೋಡ್ಲು ಗ್ರಾಮಕ್ಕೆ ತೆರಳುವ ರಸ್ತೆ ಅವ್ಯವಸ್ಥೆ

ಮಡಿಕೇರಿ: ತಾಲ್ಲೂಕಿನ ಮುಕೋಡ್ಲು ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸ್ಥಳೀಯ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತದ ಕೇಂದ್ರ ಸ್ಥಾನವಾದ ಮಡಿಕೇರಿಯಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಮುಕ್ಕೋಡ್ಲು ಗ್ರಾಮ ಕಳೆದ ಹಲವು ದಶಕಗಳಿಂದ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ರಾಜಕೀಯವಾಗಿ ಹೆಚ್ಚು ಪ್ರಭಾವೀ ಗ್ರಾಮವಾಗಿದ್ದರೂ ಜನಪ್ರತಿನಿಧಿಗಳ ಕರುಣೆ ಈ ಗ್ರಾಮಕ್ಕೆ ವರವಾಗಿ ದೊರೆತ್ತಿಲ್ಲ.

ಮುಕ್ಕೋಡ್ಲುವಿನ ಕಲ್ಲುಕೊಟ್ಟು ವರೆಗಿನ ರಸ್ತೆ ಸಂಪೂರ್ಣವಾಗಿ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನಗಳ ಸಂಚಾರ ಅಸಾಧ್ಯವಾಗಿದೆ. ಮುಕ್ಕೋಡ್ಲು ಮೂಲಕ ಪ್ರಖ್ಯಾತ ಪ್ರವಾಸಿತಾಣ ಮಾಂದಲಪಟ್ಟಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಗೂ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ದೊಡ್ಡ ಸಾಹಸವೇ ಆಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಅನುದಾನ ಮುಕ್ಕೋಡ್ಲು ಭಾಗದ ಗ್ರಾಮೀಣ ರಸ್ತೆಯ ಅಭಿವೃದ್ಧಿಗೆ ವಿನಿಯೋಗವಾಗಿಲ್ಲ ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.

ಮುಕ್ಕೋಡ್ಲು ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ನೂರಾರು ಗ್ರಾಮಸ್ಥರು ನೆಲೆಸಿದ್ದಾರೆ. ರಸ್ತೆ, ಸೇತುವೆ ಸೇರಿದಂತೆ ಸರ್ಕಾರದ ಸೌಲಭ್ಯಗಳು ಇಲ್ಲಿನ ಜನರಿಗೆ ಮರೀಚಿಕೆಯಾಗಿದೆ. ಸೂಕ್ತ ರಸ್ತೆಗಳಿಲ್ಲದ ಕಾರಣ ಸಕಾಲದಲ್ಲಿ ವಾಹನಗಳ ಸಂಪರ್ಕ ಅಸಾಧ್ಯವಾಗಿದೆ. ಮಳೆಗಾಲದಲ್ಲಿ ಇಲ್ಲಿನ ಜನರ ಜೀವನ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೇ ಪ್ರೀತಿ ಎನ್ನುವಂತ್ತಿದೆ.

ಅನಾರೋಗ್ಯದಿಂದ ಬಳಲುತ್ತಿರುವವರನ್ನು ಹಾಗೂ ಮಹಾಮಳೆಯಿಂದ ಅನಾಹುತಕ್ಕೆ ಸಿಲುಕುವವರನ್ನು ಸ್ಥಳಾಂತರ ಮಾಡಲು ಅಸಾಧ್ಯವಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡರೆ ವಾರ ಪೂರ್ತಿ ಕತ್ತಲಿನಲ್ಲೇ ಜೀವನ ಸಾಗಿಸಬೇಕು. ಗ್ರಾಮಕ್ಕೆ ಮೊಬೈಲ್ ನೆಟ್‌ವರ್ಕ್ ಸೇವೆ ಮರೀಚಿಕೆಯಾಗಿದೆ. ಬೆಟ್ಟ ಹತ್ತಿದರೆ ಮಾತ್ರ ಸ್ವಲ್ಪ ನೆಟ್‌ವರ್ಕ್ ಸಿಗುತ್ತದೆ, ಸಂಕಷ್ಟದ ಕಾಲದಲ್ಲಿ ನೆಟ್‌ವರ್ಕ್‌ಗಾಗಿ ಬೆಟ್ಟ ಮತ್ತು ಮರ ಹತ್ತಿ ಸರ್ಕಸ್ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಈ ಗ್ರಾಮದಲ್ಲಿ ಪ್ರಭಾವಿ ರಾಜಕಾರಣಿಗಳಿದ್ದರೂ ಗ್ರಾಮಕ್ಕೆ ಅಥವಾ ಗ್ರಾಮದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಗಳ ದುರಸ್ತಿ ಕಾರ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದಿದ್ದಲ್ಲಿ ತೀವ್ರ ರೀತಿಯ ಹೋರಾಟವನ್ನು ರೂಪಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Tags:
error: Content is protected !!