Mysore
18
clear sky

Social Media

ಬುಧವಾರ, 19 ಫೆಬ್ರವರಿ 2025
Light
Dark

ಫೈನಾನ್ಸ್ ಕಿರುಕುಳ ಆರೋಪ : ಕ್ರಮಕ್ಕೆ ಒತ್ತಾಯಿಸಿ ತಹಶಿಲ್ದಾರ್ ಗೆ ಮನವಿ

ಮಡಿಕೇರಿ: ಕೆಲವು ಖಾಸಗಿ ಹಣಕಾಸು ಸಂಸ್ಥೆಗಳು, ಬಡ ಕೂಲಿ ಕಾರ್ಮಿಕರಿಗೆ ಹಾಗೂ ಇತರರಿಗೆ ಯಾವುದೇ ಆಧಾರವಿಲ್ಲದೇ ಲಕ್ಷಾಂತರ ರೂ. ಸಾಲ ನೀಡಿ ಸಾಲ ವಸೂಲಾತಿಗಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಕುಶಾಲನಗರದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್‌. ವಿಶ್ವ ತಾಲ್ಲೂಕು ತಹಶೀಲ್ದಾರ್ ಮನವಿ ಸಲ್ಲಿಸಿ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನುಕೊಲ್ಲಿ ಹಾಡಿ, ಗುಳಿಗ ಪೈಸಾರಿ ಮತ್ತು ಗ್ರಾಮ ಪಂಚಾಯಿತಿಯ ಇತರೆ ಭಾಗಗಳಲ್ಲಿ ವಾಸಿಸುತ್ತಿರುವ ಬಡ ಕಾರ್ಮಿಕರು, ದಿನನಿತ್ಯದ ಜೀವನ ನಡೆಸಲು ಕೂಲಿ ನಡೆಸಿಕೊಂಡು ಬದುಕು ಕಟ್ಟಿಕೊಂಡಿರುವ ಜನರು ಕೆಲವು ಖಾಸಗಿ ಹಣಕಾಸು ಸಂಸ್ಥೆಗಳಿಂದ ಲಕ್ಷಾಂತರ ರೂಪಾಯಿಗಳನ್ನು ಅಧಿಕ ಬಡ್ಡಿಗೆ ಸಾಲವಾಗಿ ಪಡೆದುಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಅಸಲು ಮತ್ತು ಬಡ್ಡಿ ಮರು ಪಾವತಿಸಲು ಸಾಧ್ಯವಾಗದೇ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳ ಕಿರುಕುಳ ತಾಳಲಾರದೆ ಕೆಲವರು ಊರು ಬಿಟ್ಟಿರುತ್ತಾರೆ. ಈ ವಿಚಾರವಾಗಿ ಕೆಲವರು ಮೌಖಿಕವಾಗಿ ಗ್ರಾಮ ಪಂಚಾಯಿತಿಗೆ ಪುಕಾರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ.ಎಲ್‌. ವಿಶ್ವ, ಉಪಾಧ್ಯಕ್ಷರಾದ ಕುಸುಮ, ಸದಸ್ಯರುಗಳಾದ ಸಮೀರ, ಜಾಜಿರವರು ಕುಶಾಲನಗರ ತಹಶೀಲ್ದಾರ್ ರವರಿಗೆ ಖುದ್ದಾಗಿ ಮನವಿ ಸಲ್ಲಿಸಿ, ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಮನದಟ್ಟು ಮಾಡಿಕೊಟ್ಟರು.

ಈ ಸಂದರ್ಭ ತಹಶೀಲ್ದಾರ್ ಅವರು ಮಾತನಾಡಿ, ಈ ವಿಚಾರದ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

Tags: