ಮಡಿಕೇರಿ: ಒಕ್ಕಲಿಗ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾದ ದಲಿತ ಯುವತಿಯೊಬ್ಬಳು ಮೂರೇ ದಿನಕ್ಕೆ ಸಾವಿಗೀಡಾಗಿದ್ದಾಳೆ. ಪತಿ ಹಾಗೂ ಆತನ ಕುಟುಂಬದವರ ವಿರುದ್ಧ ಮೃತ ಪತ್ನಿಯ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸಮೀಪದ ೭ನೇ ಹೊಸಕೋಟೆ ಎಂಬಲ್ಲಿ ಈ ಘಟನೆ ನಡೆದಿದೆ. ಅಕ್ಷಿತಾ (೧೮) ಕೊಲೆಯಾದ ಯುವತಿ. ಮಂಗಳವಾರ ಸಂಜೆ ಅನುಮಾನಾಸ್ಪದವಾಗಿ ಸಾವು ಸಂಭವಿಸಿದೆ. ಅದೇ ಗ್ರಾಮದ ಹೇಮಂತ್ ಎಂಬ ಒಕ್ಕಲಿಗ ಯುವಕನನ್ನು ಈಕೆ ಪ್ರೀತಿಸಿ ಮದುವೆಯಾಗಿದ್ದಳು. ಮೂರು ದಿನಗಳ ಹಿಂದೆ ಇಬ್ಬರೂ ದೇವಾಲಯದಲ್ಲಿ ಮದುವೆಯಾಗಿ ಬಂದಿದ್ದರು. ಇದರಿಂದ ಹೇಮಂತ್ನ ಪೋಷಕರು ಅಸಮಾಧಾನಗೊಂಡಿದ್ದರು. ದಲಿತ ಯುವತಿ ತಮ್ಮ ಮಗನನ್ನು ಮದುವೆಯಾದುದು ಅವರಿಗೆ ಇಷ್ಟವಿರಲಿಲ್ಲ. ಆಕೆಯನ್ನು ಸಾಯಿಸಿಬಿಡುವುದಾಗಿ ಹೇಳಿದ್ದರು ಎಂದು ಅಕ್ಷಿತಾ ಕುಟುಂಬಸ್ಥರು ಆರೋಪಿಸಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.