Mysore
20
overcast clouds
Light
Dark

ಭತ್ತ ಕೃಷಿ ಕ್ಷೇತ್ರಕ್ಕೆ ಮತ್ತಷ್ಟು ಒತ್ತು ನೀಡಿ: ಎನ್.ಎಸ್.ಭೋಸರಾಜು

ಮಡಿಕೇರಿ: ರೈತರು ಭತ್ತ ಕೃಷಿ ಪದ್ಧತಿಯನ್ನು ಮತ್ತಷ್ಟು ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ಭತ್ತ ಕೃಷಿ ಪದ್ಧತಿಯಿಂದ ಹಿಂಜರಿಕೆ ಬೇಡ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಸಲಹೆ ಮಾಡಿದ್ದಾರೆ.

ವಿರಾಜಪೇಟೆ ತಾಲೂಕಿನ ಬೊಳ್ಳುಮಾಡು ಗ್ರಾಮದ ಮಾತಂಡ ಶಕು ಅಕ್ಕಮ್ಮ ಹಾಗೂ ಮನು ಇವರ ಗದ್ದೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಬುಧವಾರ ನಡೆದ ‘ಬೇಲ್ ನಮ್ಮೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದಕ್ಷಿಣ ಭಾರತದಲ್ಲಿ ಭತ್ತ ಪ್ರಮುಖ ಆಹಾರ ಬೆಳೆಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಭತ್ತ ಕೃಷಿಯಿಂದ ವಿಮುಖರಾಗದೆ, ಭತ್ತ ಕೃಷಿಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.

ಭತ್ತ ಕೃಷಿ ಮಾಡುವುದರಿಂದ ಅಂತರ್ಜಲವು ಸಹ ಹೆಚ್ಚಾಗಲಿದೆ. ಆದ್ದರಿಂದ ಭತ್ತ ಉತ್ಪಾದನೆಯಿಂದ ಲಾಭ-ನಷ್ಟ ಬಗ್ಗೆ ನೋಡದೆ ಭತ್ತ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕರ್ನಾಟಕದ ಉತ್ತರ ಭಾಗದ ತುಂಗಾಭದ್ರ ಮತ್ತು ಆಲಮಟ್ಟಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯನ್ನು ವರ್ಷಕ್ಕೆ ಎರಡು ಬೆಳೆ ಬೆಳೆಯಲಾಗುತ್ತದೆ. ಭತ್ತವೇ ಪ್ರಮುಖ ಕೃಷಿ ಪದ್ಧತಿಯಾಗಿದೆ ಎಂದು ತಿಳಿಸಿದರು.

ಭತ್ತ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರವು ಸಹ ಹಲವು ಸಹಾಯಧನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭತ್ತ ಬಿತ್ತನೆ ಬೀಜವನ್ನು ಸಹಾಯಧನದಡಿ ನೀಡಲಾಗುತ್ತದೆ. ಭತ್ತ ಬೆಳೆದ ನಂತರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರದಿಂದ ಖರೀದಿಸಲಾಗುತ್ತದೆ. ಸಹಾಯಧನದಡಿ ಪವರ್ ಟಿಲ್ಲರ್, ಭತ್ತದ ನಾಟಿ ಯಂತ್ರ ಒದಗಿಸಲಾಗುತ್ತದೆ. ಕರ್ನಾಟಕ ಕೃಷಿ ಸಮೃದ್ಧಿ ಯೋಜನೆ ಪ್ರಸಕ್ತ ಬಜೆಟ್‍ನಲ್ಲಿ ಘೋಷಣೆಯಾಗಿದ್ದು, ಅನುಷ್ಠಾನಗೊಳ್ಳಬೇಕಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ, ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಕೃಷಿ ಪದ್ದತಿಯನ್ನು ಉಳಿಸಿಕೊಂಡು, ಕೊಡವ ಸಂಸ್ಕøತಿಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಬೇಲ್‍ನಮ್ಮೆ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿರುವುದು ಕೊಡವ ಸಂಸ್ಕøತಿಯನ್ನು ಯುವ ಪೀಳಿಗೆಗೆ ತಿಳಿಸಲು ಸಹಕಾರಿಯಾಗಿದೆ ಎಂದು ಪೊನ್ನಣ್ಣ ಅವರು ಅಭಿಪ್ರಾಯಪಟ್ಟರು.

ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಭತ್ತ ಬೆಳೆಯುವುದು ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದಿಂದ ಕೃಷಿ ಮಾಡುವುದು ವರ್ಷದಿಂದ ವರ್ಷಕ್ಕೆ ಕಷ್ಟವಾಗುತ್ತಿದೆ. ಅಂತರ್ಜಲ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿ ಕೃಷಿಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಆ ನಿಟ್ಟಿನಲ್ಲಿ ಭತ್ತ ಬೆಳೆಯುವುದು ಹೆಚ್ಚಾಗಬೇಕು ಎಂದು ಸಲಹೆ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ ಅವರು ಮಾತನಾಡಿ, ಕಾಡಾನೆ ಹಾವಳಿಯಿಂದ ಭತ್ತ ಬೆಳೆಯುವುದು ಕಡಿಮೆಯಾಗುತ್ತಿದೆ. ಆದ್ದರಿಂದ ಭತ್ತ ಬೆಳೆಯಲು ಉತ್ತೇಜಿಸುವಲ್ಲಿ ಹೆಚ್ಚಿನ ಸಹಾಯಧನ ಕಲ್ಪಿಸಬೇಕಿದೆ ಎಂದು ಸಲಹೆ ಮಾಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೃಷಿ, ಸಾಹಿತ್ಯ, ಸಂಸ್ಕøತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೊಡವ ಆಚಾರ ವಿಚಾರಗಳನ್ನು ಉಳಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮಕ್ಕೂ ಮೊದಲು ನಾಟಿ ಓಟ, ಹಗ್ಗ ಜಗ್ಗಾಟ ಸೇರಿದಂತೆ ಹಲವು ಕೆಸರು ಗದ್ದೆ ಕ್ರೀಡಾಕೂಟಗಳು ನಡೆದವು. ಸಚಿವರು ಆಗಮಿಸಿದ ಸಂದರ್ಭದಲ್ಲಿ ಕೊಡವ ವಾದ್ಯದೊಂದಿಗೆ ಸ್ವಾಗತಿಸಿ, ರಾಷ್ಟ್ರಧ್ವಜ ನೀಡುವ ಮೂಲಕ ಬರಮಾಡಿಕೊಳ್ಳಲಾಯಿತು.

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಶಾಸಕರಾದ ಡಾ.ಮಂತರ್ ಗೌಡ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಹಾಗೂ ಅಕಾಡೆಮಿ ಸದಸ್ಯರು ಭತ್ತ ನಾಟಿ ಮಾಡಿ ಗಮನ ಸೆಳೆದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಸೋಮಶೇಖರ್, ವಿರಾಜಪೇಟೆ ತಹಶೀಲ್ದಾರ್ ಎಚ್.ಎನ್.ರಾಮಚಂದ್ರ, ಕಾಕೋಟುಪರಂಬು ಗ್ರಾ.ಪಂ.ಅಧ್ಯಕ್ಷರಾದ ಬಟ್ಟಕಾಳಂಡ ಕಾಮುಣಿ ಸುರೇಶ್, ಬೊಳ್ಳುಮಾಡು ವಿ.ಎಸ್.ಎಸ್.ಎನ್. ಅಧ್ಯಕ್ಷರಾದ ಮಾತಂಡ ಬೇಬ ಪೂವಯ್ಯ, ಬೊಳ್ಳುಮಾಡು ಗ್ರಾ.ಪಂ.ಯ ಸಂಜು ಕಾಳಯ್ಯ, ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಗಿರೀಶ್, ಸದಸ್ಯರಾದ ಪುತ್ತರಿರಿ ಪಪ್ಪು ತಿಮ್ಮಯ್ಯ, ಚೊಟ್ಟೆಯಂಡ ಸಂಜು ಕಾವೇರಪ್ಪ, ಪೊನ್ನಿರ ಯು. ಗಗನ್, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಕಂಬೆಯಂಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ಪಾನಿಕುಟ್ಟಿರ ಕೆ.ಕುಟ್ಟಪ್ಪ, ಕುಡಿಯರ ಕಾವೇರಪ್ಪ, ನಾಯಂದಿರ ಆರ್.ಶಿವಾಜಿ, ಚೆಪ್ಪುಡಿರ ಎಸ್.ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ನಾಪಂಡ ಸಿ.ಗಣೇಶ್, ಇತರರು ಇದ್ದರು.