Mysore
20
overcast clouds
Light
Dark

ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಜ್ಜೆ ಹೆಜ್ಜೆಗೂ ತಪ್ಪು ಹುಡುಕುವ ಕೆಲಸ ನಡೆಯುತ್ತಿದೆ; ಯತೀಂದ್ರ ಸಿದ್ದರಾಮಯ್ಯ ಆರೋಪ

ಹಾಸನ: ಡಿ.ದೇವರಾಜ ಅರಸು ಹೊರತುಪಡಿಸಿದರೆ, ಹಿಂದುಳಿದ ವರ್ಗದ ನಾಯಕರಲ್ಲಿ ಸಿದ್ದರಾಮಯ್ಯ ಮಾತ್ರ ಈ ರಾಜ್ಯದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಪ್ರಬಲ ವರ್ಗ ಹೆಜ್ಜೆ ಹೆಜ್ಜೆಗೂ ಅವರಲ್ಲಿ ತಪ್ಪು ಹುಡುಕುವ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ದೂರಿದ್ದಾರೆ.

ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ಅವರು, ನಿಮ್ಮೆಲ್ಲರ ಬೆಂಬಲದಿಂದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಹಿಂದುಳಿದ ವರ್ಗದ ರಾಜಕಾರಣಿಗಳು ಇಂತಹ ರಾಜಕೀಯ ಬೆಳವಣಿಗೆ ಹೊಂದುವುದು ಅಷ್ಟು ಸುಲಭದ ಮಾತಲ್ಲ ಎಂದರು.

ಇಲ್ಲಿನ ಸಂಸದ ಶ್ರೇಯಸ್‌ ಪಟೇಲ್‌ ಅವರು ವಿಧಾನಸಭೆ ಸೋಲಿನಿಂದ ಹತಾಶರಾಗದೇ ಜನರ ನಿರಂತರ ಒಲವು ಗಳಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಅವರು ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುವ ಮನೋಭಾವ ಹೊಂದಿದ್ದಾರೆ ಎಂದು ಖುಷಿಪಟ್ಟರು.

ಹೊಳೆನರಸೀಪುರ ತಾಲ್ಲೂಕಿನಲ್ಲಿ ಜಾತಿ ವೈಷಮ್ಯ, ಅಭಿವೃದ್ಧಿ ತಾರತಮ್ಯ ಇದೆ ಎಂದು ನಾನು ಬಲ್ಲೆ. ಇಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು 20 ವರ್ಷದಿಂದ ತುಳಿತಕ್ಕೊಳಗಾಗಿ, ತಾರತಮ್ಯದ ನೋವು ಅನುಭವಿಸಿದ್ದಾರೆ. ಹಲವು ಕೆಲಸ ಆಗಬೇಕೆಂದು ನಮ್ಮ ಗಮನಕ್ಕೆ ತಂದಿದ್ದಾರೆ. ನಾನು ಸಿಎಂ ಸಿದ್ದರಾಮಯ್ಯ ಅವರ ಬಳಿ ಮಾತನಾಡುತ್ತೇನೆ. ಅದರಲ್ಲೂ ಹಾಸನದ ಹಳ್ಳಿ ಮೈಸೂರು ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.