ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ವಿಐಪಿಗಳಿಗೆ ಎರಡೇ ದಿನ ಅವಕಾಶ ಕೊಡಿ ಎಂದು ಜನಸಾಮಾನ್ಯರ ಆಗ್ರಹವಾಗಿದೆ.
ಈ ಬಾರಿ ಅಕ್ಟೋಬರ್.24 ರಿಂದ ನವೆಂಬರ್.3ರವರೆಗೂ ಹಾಸನಾಂಬೆ ದರ್ಶನಕ್ಕೆ ಅವಕಾಶವಿದ್ದು, ಹಿಂದಿನ ವರ್ಷಗಳ ಸಮಸ್ಯೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಹಾಸನಾಂಬೆ ದರ್ಶನಕ್ಕೆ ಮೊದಲು ಜನಸಾಮಾನ್ಯರಿಗೆ ಆದ್ಯತೆ ಸಿಗುವಂತಾಗಬೇಕು. ತದನಂತರದಲ್ಲಿ ವಿಐಪಿಗಳಿಗೆ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಲಾಗುತ್ತಿದೆ.
ಹಾಸನಾಂಬೆ ಗರ್ಭಗುಡಿಯ ಪ್ರವೇಶ ಕೇವಲ ವಿಐಪಿಗಳಿಗೆ ಸೀಮಿತವಾಗಿದ್ದು, ಸಾಮಾನ್ಯ ಭಕ್ತರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ದೇವರೆದುರು ಬರುವಷ್ಟರಲ್ಲಿ ಎಳೆದು ಮುಂದೆ ಕಳುಹಿಸುತ್ತಾರೆ.
ಆದ್ದರಿಂದ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಇದರ ಜೊತೆಗೆ ದೇವಿಯ ಕುಂಕುಮ ಹಾಗೂ ಹೂವನ್ನು ಧರಿಸಿಕೊಳ್ಳುವುದು ಹಿಂದುಗಳ ಸಂಪ್ರದಾಯ. ಹಾಗಾಗಿ ಇದರ ವಿತರಣೆಗೆ ಈ ವರ್ಷದಿಂದ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಲಾಗಿದೆ.