Mysore
21
overcast clouds
Light
Dark

ಹಾಸನದಲ್ಲಿ ಮುಂದುವರಿದ ಕಾಡಾನೆಗಳ ಉಪಟಳ

ಹಾಸನ: ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ರೈತರ ಜಮೀನುಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿವೆ.

ಇಂದು ಬೆಳ್ಳಂಬೆಳಿಗ್ಗೆಯೇ ಕಾಡಿನಿಂದ ನಾಡಿಗೆ ಎಂಟ್ರಿಕೊಟ್ಟಿದ್ದ ಕಾಡಾನೆಗಳು, ರೈತರ ಜಮೀನುಗಳಲ್ಲಿ ಬೆಳೆದಿದ್ದ ಶುಂಠಿ, ಬಾಳೆ, ತರಕಾರಿ ಸೇರಿದಂತೆ ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡಿವೆ.

ಇದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಅನೇಕ ಉಪಕರಣಗಳು ಹಾಗೂ ಪೈಪ್‌ಗಳನ್ನು ತುಳಿದು ನಾಶಪಡಿಸಿವೆ.

ಬೆಳ್ಳಂಬೆಳಿಗ್ಗೆಯೇ ಕಾಡಾನೆಗಳನ್ನು ಕಂಡು ಗಾಬರಿಯಾದ ರೈತರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟಲು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಜನರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಆನೆಗಳನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಈ ಭಾಗದಲ್ಲಿ ಪದೇ ಪದೇ ಆನೆಗಳ ಹಿಂಡು ದಾಳಿ ನಡೆಸುತ್ತಿದ್ದು, ಆನೆಗಳು ನಾಡಿಗೆ ಬರದಂತೆ ತಡೆಯಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ರೈತರು ಕಿಡಿಕಾರಿದ್ದಾರೆ.

ಹೆಚ್ಚಿನ ಅನಾಹುತ ಆಗುವುದಕ್ಕೂ ಮುಂಚೆ ಆನೆಗಳು ನಾಡಿಗೆ ಬರದಂತೆ ತಡೆಯಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.