Mysore
26
light rain

Social Media

ಶನಿವಾರ, 13 ಜೂನ್ 2026
Light
Dark

ಹನೂರು : ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಹನೂರು: ತಾಲ್ಲೂಕಿನ ಅಜ್ಜಿಪುರ ಗ್ರಾಮದಿಂದ ಕಾಂಚಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆರ್.ನರೇಂದ್ರ ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಆರ್ ನರೇಂದ್ರ ಎಸ್.ಡಿ. ಪಿ. ಯೋಜನೆಯಡಿ ಅಜ್ಜಿಪುರ ಗ್ರಾಮದಿಂದ ಕಾಂಚಳ್ಳಿ ಗ್ರಾಮದವರೆಗೆ 1.03 ಕೋಟಿ ರೂ. ವೆಚ್ಚದಲ್ಲಿ ಚರಂಡಿ ಮತ್ತು ಡಾಂಬರು ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಮುನಿಯಪ್ಪನ ದೊಡ್ಡಿ ಗ್ರಾಮದ ರಸ್ತೆಗೆ 40 ಲಕ್ಷ ರೂ. ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಗುತ್ತಿದೆ.ಅಜ್ಜಿಪುರದಿಂದ ಕಾಂಚಳ್ಳಿ ಗ್ರಾಮದವರೆಗೆ ರಸ್ತೆ ತೀರಾ ಹದಗೆಟ್ಟಿದ್ದು ಇದನ್ನು ಮನಗಂಡು ಅನುದಾನವನ್ನು ತರಲಾಗಿದೆ. ಗ್ರಾಮಸ್ಥರ ಒತ್ತಾಯದಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗ್ರಾಮಸ್ಥರ ಅಗತ್ಯತೆಯನ್ನು ಅರಿತು ಚರಂಡಿ ಕಾಮಗಾರಿಯನ್ನು ಹೆಚ್ಚುವರಿಯಾಗಿ ಕೈಗೊಳ್ಳಿ ಎಂದು ಸಲಹೆ ನೀಡಿದರು.

 

ಅಧಿಕ ಭಾರದ ವಾಹನಗಳಿಗೆ ನಿರ್ಬಂಧ : ಬಣ್ಣಾರಿ ದಿಂಬಂನಲ್ಲಿ ಅಧಿಕ ಭಾರದ ವಾಹನಗಳಿಗೆ ನಿರ್ಬಂಧ ಹೇರಿದ ನಂತರ ಮಲೆಮಹದೇಶ್ವರ ಬೆಟ್ಟ ಹಾಗೂ ಗರಿಕೆಕಂಡಿ ಮುಖಾಂತರ ಅಧಿಕ ಭಾರದ ವಾಹನಗಳು ಸಂಚರಿಸುತ್ತಿರುವುದರಿಂದ ಅಪಘಾತಗಳು ಹಾಗೂ ರಸ್ತೆ ತೀವ್ರ ಹದಗೆಟ್ಟಿದೆ. ಈ ಹಿನ್ನೆಲೆ ಇಂದಿನಿಂದಲೇ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇಂದು ಸಚಿವರ ಆದೇಶದ ಮೇರೆಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಲಿದ್ದಾರೆ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು.

8 ಮನೆಗಳಿಗೆ ತಲಾ 3ಲಕ್ಷ ಪರಿಹಾರ: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 1 ವಾರದಿಂದ ಬೀಳುತ್ತಿರುವ ಸತತ ಮಳೆಗೆ 8 ಮನೆಗಳು ಶಿಥಿಲಗೊಂಡಿದೆ. ಇಂದು ಚಾಮರಾಜನಗರದಲ್ಲಿ ನಡೆದ ಸಭೆಯಲ್ಲಿ ಉಸ್ತುವಾರಿ ಸಚಿವ ವಿ ಸೋಮಣ್ಣ ರವರ ಗಮನಕ್ಕೆ ತರಲಾಗಿದ್ದು ಪ್ರತಿ ಮನೆಗಳಿಗೆ ತಾತ್ಕಾಲಿಕವಾಗಿ ಹತ್ತು ಸಾವಿರ ಪರಿಹಾರ ನಂತರ 3ಲಕ್ಷ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಆರ್ ನರೇಂದ್ರ ತಿಳಿಸಿದರು.

ಪ್ರವಾಹ ಕಡಿಮೆಯಾದ ನಂತರ ಸೇತುವೆ ದುರಸ್ತಿಗೆ ಕ್ರಮ: ಕಳೆದ 1ವಾರದಿಂದ ಬಿಆರ್ ಟಿ ಹಾಗೂ ಒಡೆಯರಪಾಳ್ಯ ಸುತ್ತಮುತ್ತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಲೊಕ್ಕನಹಳ್ಳಿ ಹೋಬಳಿಯ ಎಲ್ಲಾ ಹಳ್ಳಗಳು ತುಂಬಿ ಹರಿಯುತ್ತಿರುವ ಪರಿಣಾಮ ಸೇತುವೆಗಳು ದುರಸ್ತಿಗೊಂಡಿದೆ.ಬಸವನಗುಡಿ ಸಮೀಪದ ಸೇತುವೆ ಸಂಪೂರ್ಣ ದುರಸ್ತಿಯಾಗದಿರುವುದರಿಂದ ತೀವ್ರ ತೊಂದರೆಯಾಗಿದೆ ಈ ಹಿನ್ನೆಲೆ ಸಂಬಂಧಪಟ್ಟ ಹಿರಿಯ ಅಭಿಯಂತರರಿಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.ಮಸ್ಕತ್ತಿ ಹಳ್ಳ ಹಾಗೂ ಜಡೆತಡಿ ಹಳ್ಳದ ಕಾಮಗಾರಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ. ಆದರೆ ಕಾಮಗಾರಿ ವಿನ್ಯಾಸ ಬದಲಾವಣೆ ಮಾಡಬೇಕಿದ್ದರಿಂದ ಕಾಮಗಾರಿ ತಡವಾಗಿದೆ. ಮಳೆಯ ನಂತರ ಈ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.

24 ಹೆಕ್ಟೇರ್ ಬೆಳೆ ಹಾನಿ: ಕಳೆದ 1ವಾರದಿಂದ ಲೊಕ್ಕನಹಳ್ಳಿ ಹೋಬಳಿ ಯಲ್ಲಿ ಅಧಿಕ ಮಳೆಯಾಗಿರುವುದರಿಂದ ರೈತರು ಬೆಳೆದಿರುವ ಆಲೂಗಡ್ಡೆ ಬೆಳ್ಳುಳ್ಳಿ ಹಾಗೂ ತರಕಾರಿ ಬೆಳೆಗಳು ಸೇರಿದಂತೆ 24
ಹೆಕ್ಟೇರ್ ಬೆಳೆ ಹಾನಿಯಾಗಿದೆಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಇವರಿಗೆ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,ಇದಲ್ಲದೆ ಪ್ರವಾಹ ಸಂದರ್ಭದಲ್ಲಿ ಸತ್ತೇಗಾಲ ಹಾಗೂ ಎಡಕುರಿಯ,ಧನಗೆರೆ ಹಾಗೂ ಸರಗೂರು ಗ್ರಾಮಗಳಲ್ಲಿ 20ಎಕರೆ ಭತ್ತದ ಬೆಳೆ ಹಾನಿಯಾಗಿದೆ ಇದಕ್ಕೂ ಕೂಡ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ. ಪಂ.ಮಾಜಿ ಉಪಾಧ್ಯಕ್ಷ ಬಸವರಾಜು, ತಾ. ಪಂ.ಮಾಜಿ ಅಧ್ಯಕ್ಷ ಮುರುಡೇಶ್ವರ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಲಿಂಗರಾಜು, ಮುಖಂಡರಾದ ಎಂ. ಮಾದೇವ್, ಅಜ್ಜೀಪುರ ನಾಗರಾಜು, ಬೈರಾಜ್, ಕಲಂದರ್ ಪಾಷ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!