Mysore
33
scattered clouds

Social Media

ಗುರುವಾರ, 28 ಮೇ 2026
Light
Dark

ಹನೂರು : ಮಳೆಹಾನಿ ನಷ್ಟಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ & ರಾಜ್ಯ ಸರ್ಕಾರಕ್ಕೆ ಒತ್ತಾಯ

ಹನೂರು: ಮಳೆ ಹಾನಿಯಿಂದ ನಷ್ಟ ಹೊಂದಿರುವ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ನೀಡುತ್ತಿರುವ ಪರಿಹಾರ ಧನವನ್ನು ಹೆಚ್ಚಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಶಾಸಕ ಆರ್ ನರೇಂದ್ರ ಒತ್ತಾಯಿಸಿದರು.

ಲೊಕ್ಕನಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಮಳೆಯಿಂದ ನಷ್ಟವಾಗಿರುವ ಬೆಳೆ ಪರಿಶೀಲನೆ ನಡೆಸಿ ಅವರು ಮಾತನಾಡಿದರು.  ಸರ್ಕಾರ ನೀಡುತ್ತಿರುವ ಪರಿಹಾರ ಧನ ಬಿತ್ತನೆ ಬೀಜಗಳಿಗೂ ಖರ್ಚಿಗೂ ಸಾಕಾಗುವುದಿಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 1ಹೆಕ್ಟೇರ್ ಗೆ ಐವತ್ತು ಸಾವಿರವಾದರೂ ಪರಿಹಾರ ನೀಡಬೇಕು, ಎಂದು ಒತ್ತಾಯಿಸಿದ ಅವರು ಲೊಕನಹಳ್ಳಿ ಹೋಬಳಿ ಒಂದರಲ್ಲೇ 3 ರಿಂದ 4ಕೋಟಿ ತೋಟಗಾರಿಕೆ ಬೆಳೆಗಳು ನಷ್ಟವುಂಟಾಗಿದೆ. ಆಲೂಗೆಡ್ಡೆ ಬೆಳ್ಳುಳ್ಳಿ ಸಾಕಷ್ಟು ಹಾನಿಗೀಡಾಗಿವೆ. ಸರ್ಕಾರ 1ಹೆಕ್ಟೇರ್ ಗೆ 13.600ರೂ ಪರಿಹಾರ ನೀಡುತ್ತಿರುವುದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲವೆಂದು ಅಸಮದಾನ ವ್ಯಕ್ತಪಡಿಸಿದರು.

ಕುಡುವಾಳೆ ಸಮೀಪದ ಜಡೆತಡೆ ಹಳ್ಳ ಹಾಗೂ ಮಸ್ಕಿತಿ ಹಳ್ಳ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಇತ್ತೀಚಿಗೆ ಕೆಎಸ್ಆರ್ ಟಿ ಸಿ ಬಸ್ ಅಪಘಾತಕ್ಕೀಡಾಗಿ ಸಾವು-ನೋವು ಸಂಭವಿಸಿದ ಕುಡುವಾಳೆ ದೊಡ್ಡಿ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಸಂಬಂಧ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸಚಿವರು ಇನ್ನೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಅಧಿಕಾರಿಗಳು ತಾತ್ಕಾಲಿಕವಾಗಿ ತಡೆ ಗೋಡೆಗಳನ್ನು ನಿರ್ಮಿಸಿದ್ದಾರೆ ಎಂದರು.

ಆನೆ ಕಂದಕ ಹಾಗೂ ರೈಲ್ವೆ ಬ್ಯಾರಿಕೇಡ್ ದುಬಾರಿಯಾಗಿದೆ. ಅರಣ್ಯ ಇಲಾಖೆಯವರು ನೂತನವಾಗಿ ಸೋಲಾರ್ ಹ್ಯಾಂಗಿಂಗ್ ಬೇಲಿಯನ್ನು ನಿರ್ಮಾಣ ಮಾಡಿರುವುದರಿಂದ ಪ್ರಾಣಿಗಳ ಹಾವಳಿ ನಿಯಂತ್ರಣ ಜೊತೆಗೆ ಕಡಿಮೆ ಕರ್ಚು ವೆಚ್ಚ ಆಗಿದೆ. ನಮಗೆ ಮಾಹಿತಿ ಇಲ್ಲದಂತೆ ಬೇರೆಡೆಯಿಂದ ಮೂರು ಆನೆಗಳನ್ನು ನಮ್ಮ ಅರಣ್ಯಕ್ಕೆ ತಂದು ಬಿಡಲಾಗಿದೆ. ಈ ಪೈಕಿ ಮಾರ್ಟಳ್ಳಿ ಭಾಗದಲ್ಲಿ ಪುಂಡಾನೆಯೊಂದು ಜನರಿಗೆ ತೊಂದರೆ ನೀಡುತ್ತಿದೆ. ಇದೇ ಮುಂದುವರೆದರೆ ಅದನ್ನು ಬೇರೆಡೆಗೆ ಸ್ಥಳಾಂತರಿಸಬೇಕಿದೆ ಎಂದು ಮಾಹಿತಿ ನೀಡಿದರು.

ಶಾಸಕರು ಮಳೆಹಾನಿ ಪ್ರವಾಸ ನಿಮಿತ್ತ ಮೊದಲಿಗೆ ಜಡೆತಡಿಹಳ್ಳ ಸೇತುವೆ ವೀಕ್ಷಣೆ ಮಾಡಿ ಗಿಡಗಂಟಿಗಳಿಂದ ಆವೃತವಾಗಿರುವ ಸೇತುವೆಯನ್ನು ನಾಳೆಯಿಂದಲೇ ತೆರವುಗೊಳಿಸಿ ಎಂದು ಸಹಾಯಕ ಇಂಜಿನಿಯರ್ ಚಿನ್ನಣ್ಣ ಅವರಿಗೆ ಸೂಚಿಸಿದರು. ಇದೇ ಮಾರ್ಗದಲ್ಲಿ ಚಿಕ್ಕರಂಗಶೆಟ್ಟಿ ಗ್ರಾಮಸ್ಥರು ಕಾಡು ಹಂದಿಗಳ ಹಾವಳಿ ನಿಯಂತ್ರಣದ ಬಗ್ಗೆ ಕ್ರಮ ವಹಿಸುವಂತೆ ರೈತರು ಶಾಸಕರಿಗೆ ಮನವಿ ಸಲ್ಲಿಸಿದರು. ಅಲ್ಲದೆ ಆನೆ ಕಂದಕಗಳನ್ನು ಸಮರ್ಪಕವಾಗಿ ನಿರ್ಮಿಸಿಕೊಟ್ಟು ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು. ಕುಡುವಾಳೆ ದೊಡ್ಡಿ ಹಳ್ಳ ವೀಕ್ಷಣೆ ಮಾಡಿ, ಮುರಿದು ಬಿದ್ದಿರುವ ಭಾರಿ ಗಾತ್ರದ ಮರಗಳನ್ನು ತೆರವು ಗೊಳಿಸುವಂತೆ ತಿಳಿಸಿದರು. ಬಳಿಕ ಪಿ. ಜಿ.ಪಾಳ್ಳ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜತೆ ಚರ್ಚಿಸಿದರು. ಪಿ.ಜಿ.ಪಾಳ್ಯ ಗ್ರಾಮದ ರೈತರಾದ ಲೂರ್ದಮ್ಮ ಚಿನ್ನಪ್ಪ ಎಂಬುವವರ ಜಮೀನಿನಲ್ಲಿ ಬೆಳೆಯಲಾಗಿದ್ದ ಬೆಳ್ಳುಳ್ಳಿ ಬೆಳೆ ನಷ್ಟ ಆಗಿರುವುದನ್ನು ಪರಿಶೀಲಿಸಿದರು. ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಮನೆ ಹಾನಿಯಾಗಿರುವುದನ್ನು ವೀಕ್ಷಿಸಿ, ಇದೇ ಗ್ರಾಮದಲ್ಲಿ ಮಲ್ಲಿಕಾರ್ಜುನ, ಹರೀಶ್, ಹನುಮಂತ ಶೆಟ್ಟಿ ಜಮೀನಿನಲ್ಲಿ ನಷ್ಟಕ್ಕೀಡಾದ ಬೆಳ್ಳುಳ್ಳಿ ಬೆಳೆಯನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ ದಿಡೀರ್ ಭೇಟಿ: ಬಿ.ಜಿ.ದೊಡ್ಡಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ದಿಡೀರ್ ಭೇಟಿ ನೀಡಿದ ಶಾಸಕ ನರೇಂದ್ರ ಅವರು, ಅಂಗನವಾಡಿ ಕೇಂದ್ರದಲ್ಲಿ ನೀಡಲಾಗುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಸಿಡಿಪಿಒ ನಾಗೇಶ್ ಅವರಿಗೆ ದೂರವಾಣಿ ಕರೆ ಮಾಡಿ ಗುಣಮಟ್ಟದ ಆಹಾರವನ್ನು ನೀಡುವಂತೆ ಸೂಚಿಸಿದರು.ಇನ್ನು 7 ದಿನಗಳಿಂದ ಅಂಗನವಾಡಿ ಕಾರ್ಯಕರ್ತೆ ಬಾರದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದರು. ಪಕ್ಕದಲ್ಲೇ ಇದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಭೇಟಿ ನೀಡಿದ ಅವರು ಅಲ್ಲಿನ ಶಿಕ್ಷಕರುಗಳಿಂದ ದಾಖಲಾತಿ ಬಗ್ಗೆ ಮಾಹಿತಿ ಪಡೆದರು. ಸರ್ಕಾರಿ ಶಾಲೆ ಆವರಣದಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಕಂಡು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಆನಂದಯ್ಯ, ಎಇಇ ರಾಜೇಶ್ ಮುನ್ಸಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಭಾಸ್ಕರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದರಮ್ಮ,ರಾಜಸ್ವ ನಿರೀಕ್ಷಕ ಬಿ ಪಿ ಮಾದೇಶ್, ಆರ್ ಎಫ್ ನದಾಫ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ರೈತರು, ಮುಖಂಡರುಗಳು, ಸಾರ್ವಜನಿಕರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!