ಹನೂರು: ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರನ್ನು ಸರ್ಕಾರ ವರ್ಗಾವಣೆಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾನಿರತರು, ಮಲೆಮಹದೇಶ್ವರ ಮುಖ್ಯರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಖಾಸಗಿ ಬಸ್ ನಿಲ್ದಾಣದ ಬಳಿ ಜಮಾಯಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಮಲೆಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಅರಣ್ಯ ಅಧಿಕಾರಿಯನ್ನು ವರ್ಗಾವಣೆ ಮಾಡುವುದು ಈ ಭಾಗದ ರೈತರಿಗೆ ಅನ್ಯಾಯ ಮಾಡಿದಂತಾಗಿದೆ. ಇಂತಹ ದಕ್ಷ ಅಧಿಕಾರಿಯಿಂದ ವನ್ಯಜೀವಿ ಹಾಗೂ ಮಾನವ ಸಂಘರ್ಷ ಕಡಿಮೆಯಾಗಿತ್ತು. ಪ್ರಮುಖವಾಗಿ ಚೆಂಗಡಿ ಗ್ರಾಮಕ್ಕೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಬುದ್ಧತೆಯಿಂದ ಯೋಜನೆಯನ್ನು ಯಶಸ್ವಿಗೊಳಿಸಲು
ಶ್ರಮಿಸುತ್ತಿದ್ದಾರೆ .ಈ ಯೋಜನೆ ಮುಗಿಯುವವರೆಗೂ ಮಲೆಮಹದೇಶ್ವರ ವನ್ಯಜೀವಿಧಾಮದ ವಿಭಾಗದಲ್ಲಿಯೇ ಇರಬೇಕು. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಅವರ ವರ್ಗಾವಣೆ ಆದೇಶವನ್ನು ಆಗಸ್ಟ್ 15ರೊಳಗೆ ಹಿಂಪಡೆಯಬೇಕು ಇಲ್ಲದಿದ್ದರೆ ಸೋಮಣ್ಣ ವಿರುದ್ಧ ರೈತ ಸಂಘಟನೆ ಉಗ್ರವಾದ ಪ್ರತಿಭಟನೆ ನಡೆಸುತ್ತದೆ. ಚಂಗಡಿ ಒಂದು ಗ್ರಾಮಕ್ಕೆ ಪುನರ್ವಸತಿ ಕಲ್ಪಿಸಿ ಯೋಜನೆ ಸಾಕಾರಗೊಂಡರೆ. ಇನ್ನೂಳಿದ ಕಾಡಂಚಿನ ಗ್ರಾಮಗಳ ಜನತೆ ಕಾಡಿನಿಂದ ನಾಡಿಗೆ ಬರುತ್ತಿದ್ದರು. ಇದೊಂದು ರಾಜ್ಯಕ್ಕೆ ಮಾದರಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಅರಣ್ಯಾಧಿಕಾರಿ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಅರಣ್ಯವನ್ನು ಸಂರಕ್ಷಿಸುವುದು ಜೊತೆಗೆ ಕಾಡಂಚಿನ ಜನತೆ, ರೈತರ ಜೊತೆ ಉತ್ತಮವಾದ ಒಡನಾಟವನ್ನು ಇಟ್ಟುಕೊಂಡಿದ್ದರು. ಅಮೂಲ್ಯವಾದ ವನ್ಯ ಮತ್ತು ಪ್ರಾಣಿ ಸಂಕುಲವನ್ನು ಹೊಂದಿರುವ ಇಂತಹ ಪ್ರಕೃತಿ ಶ್ರೀಮಂತಿಕೆಯ ಅರಣ್ಯ ಭಾಗಕ್ಕೆ ಇಂತಹ ಅಧಿಕಾರಿಯ ಅವಶ್ಯಕತೆಯಿದೆ ಎಂಬುದನ್ನು ಸರ್ಕಾರ ಮನಗಾಣಬೇಕು ಎಂದು ತಿಳಿಸಿದರು.
ಟ್ರಾಫಿಕ್ ಜಾಮ್ : ಡಿಎಫ್ ಒ ಏಡುಕೊಂಡಲು ಅವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ರೈತ ಸಂಘದ ಸದಸ್ಯರು ಮಲೆಮಾದೇಶ್ವರ ಬೆಟ್ಟ ಹಾಗೂ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದ ಹಿನ್ನೆಲೆ ಮೂವತ್ತು ನಿಮಿಷಗಳ ಕಾಲ ಹೆಚ್ಚು ಟ್ರಾಫಿಕ್ ಸಮಸ್ಯೆ ಉಂಟಾಗಿ ಮಲೆಮಾದೇಶ್ವರ ಬೆಟ್ಟದ ಭಕ್ತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವಣ್ಣ, ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ಡಿಎಸ್ ಎಸ್ ಸಮಿತಿ ಅಧ್ಯಕ್ಷ ದೊಡ್ಡಿಂದುವಾಡಿ ಸಿದ್ದರಾಜು, ರೈತ ಮುಖಂಡರುಗಳಾದ ಶಾಂತರಾಜು, ದೊಡ್ಡೇಗೌಡ, ಚಿಕ್ಕಮಾದು, ಮುತ್ತುರಾಜು, ಮುರುಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.