ಹನೂರು: ಜಗತ್ತು ಕಂಡ ಶ್ರೇಷ್ಠ ಚಿಂತಕ ಮಹಾಮಾನವತವಾದಿ ಡಾ.ಬಿ.ಆರ್.ಅಂಬೇಡ್ಕರ್ ಶತಶತಮಾನಗಳು ಕಳೆದರೂ ಅಜಾರಾಮರ ಎಂದು ಬಿಜೆಪಿ ಮುಖಂಡ ನಿಶಾಂತ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶಕ್ಕೆ ಬಹು ಅಮೂಲ್ಯವಾದ ಸಂವಿಧಾನವನ್ನು ನೀಡಿದ್ದಾರೆ. ಅವರು ನೀಡಿರುವ ಸಂವಿಧಾನ ಯಾವುದೇ ಒಂದು ಜಾತಿ, ಧರ್ಮ, ಭಾಷೆಗೆ ಸೀಮಿತವಾದದ್ದಲ್ಲ. ಸಂವಿಧಾನದ ನೀತಿ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕಾಗಿದೆ. ಸ್ವಾಭಿಮಾನಿಯಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ ಆದರ್ಶಗಳಂತೆ ಬದುಕಿದರೆ ನಾವು ಯಾರ ದಾಸ್ಯಕ್ಕೂ ಒಳಪಡುವ ಅವಶ್ಯಕತೆ ಇರುವುದಿಲ್ಲ,
ಸರ್ವ ಜನಾಂಗದ ಹಿತಕ್ಕಾಗಿ ಅದರಲ್ಲೂ ಶೋಷಿತರು, ದಲಿತರು, ದಮನೀತರು, ಮಹಿಳೆಯರು ಕೂಡ ಸಮಾಜದ ಮುಖ್ಯ ವಾಹಿನಿಗೆ ಬರುವ ದಿಸೆಯಲ್ಲಿ ಜಾರಿಗೆ ತರಲಾದ ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಗ್ರಂಥವಾಗಿದೆ. ಪ್ರಸ್ತುತ ದಿನಗಳಲ್ಲಿ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ನಿಟ್ಟಿನಲ್ಲಿ ಷಡ್ಯಂತ್ರವನ್ನು ರೂಪಿಸಲಾಗುತ್ತಿದೆ. ಹಾಗಾಗಿ ನಾವೆಲ್ಲರೂ ಡಾ.ಅಂಬೇಡ್ಕರ್ ಹಾಗೂ ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಪರಿನಿಬ್ಬಾಣದ ಅಂಗವಾಗಿ ಗ್ರಾಮದಲ್ಲಿ ಮೊಂಬತ್ತಿ ಮೆರವಣಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ಹಾಗೂ ಯುವಕರು ಗ್ರಾಮದ ಯಜಮಾನರು, ಮುಖಂಡರು, ಮಕ್ಕಳ ಜೊತೆಗೂಡಿ ಡಾ.ಅಂಬೇಡ್ಕರ್ ಅವರ ಭಾವಚಿತ್ರದ ಜೊತೆ ಮೊಂಬತ್ತಿ ಬೆಳಗಿಸಿ ಮೌನ ಮೆರವಣಿಗೆಯಲ್ಲಿ ಸಾಗುವ ಮೂಲಕ ಮಹಾ ಮಾನವತವಾದಿ, ಸಂವಿಧಾನ ಶಿಲ್ಪಿ ಅವರಿಗೆ ಗೌರವ ಪ್ರಣಾಮಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರೇಮಲತಾ ಕೃಷ್ಣಸ್ವಾಮಿ, ಮುಖಂಡರುಗಳಾದ ಕಿರಣ್ ಚೇತನ್ ಸುರೇಶ್, ಸಮುದಾಯದ ಮುಖಂಡರು ಸೇರಿದಂತೆ ಇನ್ನಿತರರು ಹಾಜರಿದ್ದರು.





