ಮೈಸೂರು: ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಮಂಗಳವಾರ ರಾತ್ರಿ ಸಾವಿರಾರು ಸಾರ್ವಜನಿಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಅಧಿದೇವತೆ ಚಾಮುಂಡೇಶ್ವರಿ ತೆಪ್ಪೋತ್ಸವ ನಡೆಯಿತು.ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಸರಳವಾಗಿ ನಡೆದಿದ್ದ ತೆಪ್ಪೋತ್ಸವ ಈ ಬಾರಿ ವೈಭವದಿಂದ ಜರುಗಿತು. ವಿಜಯದಶಮಿಯ ಬಳಿಕ ನಡೆಯುವ ರಥೋತ್ಸವದ ಮರುದಿನ ತೆಪ್ಪೋತ್ಸವ ನಡೆಯುವುದು ವಾಡಿಕೆ.
ಉತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ನಾನಾ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ರಾತ್ರಿ 7.30ಕ್ಕೆ ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ತೆಪ್ಪೋತ್ಸವ ನೆರವೇರಿಸಲಾಯಿತು. ದೇವಾಲಯದ ಕೆಳ ಆವರಣದಲ್ಲಿರುವ ದೇವಿಕೆರೆಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಆರಾಧನೆ ವಾಡಲಾಯಿತು.

ಸಾವಿರಾರು ಮಂದಿ ಭಕ್ತರು ಈ ಅವಿಸ್ಮರಣೀಯ ಗಳಿಗೆಯನ್ನು ಕಣ್ತುಂಬಿಕೊಂಡರು. ಮೊದಲಿಗೆ ಬೆಟ್ಟದ ದೇವಾಲಯದಲ್ಲಿರುವ ದೇವರಿಗೆ ನಮಿಸಿದ ಜನತೆ ನಂತರ ದೇವಾಲಯದ ಕೆಳ ಆವರಣದಲ್ಲಿರುವ ದೇವಿ ಕೆರೆ ಬಳಿಗೆ ತೆರಳಿ ತೆಪ್ಪೋತ್ಸವವನ್ನು ಕಂಡು ಸಂಭ್ರಮಿಸಿದರು.

ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಂಡಿದ್ದ ತೆಪ್ಪದಲ್ಲಿ ದೇವಿಯ ಮೂರ್ತಿಯನ್ನಿಟ್ಟು ದೇವಿಕೆರೆಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ನಡೆಸಲಾಯಿತು. ತೆಪ್ಪೋತ್ಸವದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ಪಚ್ಚೆ ಹಾರ ಸೇರಿದಂತೆ ನಾನಾ ಆಭರಣಗಳಿಂದ ಅಲಂಕರಿಸಲಾಗಿತ್ತು.
ಕುಶಾಲುತೋಪು ಸಿಡಿಸಿ ದೇವಿಗೆ ಗೌರವ ಸಲ್ಲಿಸಲಾಯಿತು. ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ತೆಪ್ಪೋತ್ಸವದ ಎಲ್ಲಾ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.





