ಹನೂರು: ಪಟ್ಟಣದ ಬಂಡಳ್ಳಿ ಮುಖ್ಯರಸ್ತೆಯಲ್ಲಿರುವ ಬೃಹತ್ ಗಾತ್ರದ ಮರವೊಂದು ಸತತವಾಗಿ ಬೀಳುತ್ತಿರುವ ಮಳೆಗೆ ಬೀಳುವ ಹಂತದಲ್ಲಿದ್ದು ಇದನ್ನು ತೆರವುಗೊಳಿಸುವಂತೆ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ಅಮ್ಮನ್ ಮೆಡಿಕಲ್ ಮುಂಭಾಗದಲ್ಲಿರುವ ಬೃಹತ್ ಗಾತ್ರದ ಮರವೊಂದು ಸತತವಾಗಿ ಬೀಳುತ್ತಿರುವ ಮಳೆಗೆ ರಸ್ತೆಯತ್ತ ವಾಲಿದ್ದು ಕೆಲವು ಕಟ್ಟಡಗಳು ಮರದ ಕೆಳಗೆ ಬೀಳುವುದನ್ನು ತಡೆದಿದೆ.
ಈ ರಸ್ತೆಯು ಬಂಡಳ್ಳಿ ಶಾಗ್ಯ ಹಲಗಾಪುರ ತೋಮಿಯರ್ ಪಾಳ್ಯ ಚಂಗವಾಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ.ಇದಲ್ಲದೆ ಪ್ರತಿಷ್ಟಿತ ಕ್ರಿಸ್ತರಾಜ ವಿದ್ಯಾಸಂಸ್ಥೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಖಾಸಗಿ ಆಸ್ಪತ್ರೆ ಇದೇ ರಸ್ತೆಯಲ್ಲಿ ಇರುವುದರಿಂದ ಸಾವಿರಾರು ಶಾಲಾ ವಿದ್ಯಾರ್ಥಿಗಳು,ಬ್ಯಾಂಕ್ ಗ್ರಾಹಕರು ಹಾಗೂ ರೋಗಿಗಳು ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ.ಮರ ವಾಲಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲವೆಂದು ಅಂಗಡಿ ಮಾಲೀಕರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುನ್ನೆಚ್ಚರಿಕೆ ವಹಿಸಿ : ಅನಾಹುತ ಅವಘಡಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.





