Mysore
21
overcast clouds

Social Media

ಶನಿವಾರ, 10 ಜನವರಿ 2026
Light
Dark

ಕೋವಿಡ್: ಮೈಸೂರು ಭಾಗದಲ್ಲಿ ಆಕ್ಸಿಜನ್ ಕೊರತೆ ಇಲ್ಲ

ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆ ಗಳಲ್ಲಿ ಸಿದ್ಧತೆ  ಮೈಸೂರು/ಮಂಡ್ಯ/ಚಾಮರಾಜನಗರ/ಮಡಿಕೇರಿ: ಚೀನಾದಲ್ಲಿ ಪತ್ತೆಯಾಗಿರುವ ಕೋವಿಡ್- ೧೯ ಉಪತಳಿ ಬಿ.೭ ದೇಶದಲ್ಲಿಯೂ  ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ಭಾಗದ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ಈ ಸಾಂಕ್ರಾಮಿಕ ಈ ಭಾಗದಲ್ಲಿ ವ್ಯಾಪಿಸದಂತೆ ಸೂಕ್ತ ರೀತಿಯಲ್ಲಿ ಎಚ್ಚರಿಕೆವಹಿಸಿವೆ. ಮುಖ್ಯವಾಗಿ ಆಕ್ಸಿಜನ್ ಪ್ಲಾಂಟ್‌ಗಳ ಸಿದ್ಧತೆಗೆ ಆದ್ಯತೆ ನೀಡಲಾಗಿದೆ. ಸದ್ಯ ಈ ಭಾಗದಲ್ಲಿ ಸೋಂಕು ಕಂಡುಬಂದಿಲ್ಲ.
ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳು ಕೋವಿಡ್ ವೈರಸ್ ನಿಯಂತ್ರಣಕ್ಕೆ ಮುಂದಾಗಿವೆ. ಜತೆಗೆ ಸಾರ್ವಜನಿಕರಲ್ಲಿ ಮಾಸ್ಕ್ ಧರಿಸುವ ಸಂಬಂಧ ಜಾಗೃತಿ ಮೂಡಿಸಲೂ ಚಿಂತನೆನಡೆಸಿವೆ ಎನ್ನಲಾಗಿದೆ. ಈಗಾಗಲೇ ಮೂರು ಅಲೆಗಳನ್ನು ಎದುರಿಸಿದ್ದು, ೨ನೇ ಅಲೆಯಲ್ಲಿ ಮಾತ್ರ ಗಂಭೀರ ಪರಿಣಾಮಗಳನ್ನು ಜನರು ಅನುಭವಿಸಬೇಕಾಯಿತು. ಇದನ್ನು ಗಮನದಲ್ಲಿಟ್ಟುಕೊಂಡು ಈ ಜಿಲ್ಲೆಗಳು ಕೋವಿಡ್ ವಿರುದ್ಧದ ಹೋರಾಟಕ್ಕೆ ಸರ್ವಸನ್ನದ್ಧವಾಗಿವೆ.
ಮೈಸೂರ ಜಿಲ್ಲೆಯಲ್ಲಿ ಕೆ.ಆರ್.ಆಸ್ಪತ್ರೆ, ಜಿಲ್ಲಾಸ್ಪತ್ರೆ ಸೇರಿದಂತೆ ಕೆಲವು ಆಸ್ಪತ್ರೆಗಳಲ್ಲಿ ಒಟ್ಟಾರೆ 15 ಆಕ್ಸಿಜನ್ ಘಟಕಗಳನ್ನು ಸುಸ್ಥಿತಿಗೊಳಿಸಲಾಗಿದೆ. ಆಕ್ಸಿಜನ್ ಕೊರತೆ ಎದುರಾಗುವುದಿಲ್ಲ. ವೈದ್ಯರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಕೋವಿಡ್ 2ನೇ ಅಲೆಯಲ್ಲಿ ಚಾಮರಾಜನಗರದಲ್ಲಿ ಸಂಭವಿಸಿದ ಆಕ್ಸಿಜನ್ ದುರಂತ ರಾಷ್ಟ್ರ ಮಟ್ಟದಲ್ಲಿ ಚರ್ಚಿತವಾಗಿತ್ತು. ಹಾಗಾಗಿ ಈ ಬಾರಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಮುಂಜಾಗ್ರತೆಯಾಗಿ ಕೋವಿಡ್ ನಿಬರ್ಬಂಧಿಸಲು ಸಿದ್ಧತೆಯಲ್ಲಿ ನಿರತವಾಗಿದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಅಗತ್ಯ ಆಕ್ಸಿಜನ್, ತುರ್ತು ನಿಗಾ ಘಟಕ (ಐಸಿಯು)ಗಳನ್ನು ಸಜ್ಜುಗೊಳಿಸಿವೆ. ಸೋಂಕಿತರಿಗಾಗಿ ಪ್ರತ್ಯೇಕ ಕೊಠಡಿಗಳನ್ನೂ ಕೂಡ ಸಿದ್ಧಗೊಳಿಸಲಾಗಿದೆ.
ಕೊಡಗು ಜಿಲ್ಲೆಯ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಮುನ್ನೆಚ್ಚರಿಕೆಯಾಗಿ 400 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. 15 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಕೊವ್ಯಾಕ್ಸಿನ್ ಲಸಿಕೆಯ ೨ನೇ ಡೋಸ್ ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಪ್ರತಿದಿನ ೧೫೦ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಕೋವಿಡ್ ಉಪತಳಿ ಪತ್ತೆಯಾದ ಹಿನ್ನೆಲೆಯಲ್ಲಿ ಈಗ ಅದರ ಪ್ರಮಾಣವನ್ನು 500ಕ್ಕೆ ಹೆಚ್ಚಿಸಲಾಗಿದೆ. ಪರಿಸ್ಥಿತಿ ಗಂಭೀರವಾದರೆ ಸೋಂಕಿತರ ಚಿಕಿತ್ಸೆಗಾಗಿ ಮಂಡ್ಯದ ಸ್ಯಾಂಜೊ, ಸ್ಪಂದನೆ, ಬೆಳ್ಳೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗಳನ್ನು ಸಿದ್ಧಪಡಿಸಲಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ದಾಸ್ತಾನು ವಿವರ (ಕಿಲೋ ಲೀಟರ್‌ಗಳಲ್ಲಿ)

* ಜಿಲ್ಲಾಸ್ಪತ್ರೆಯಲ್ಲಿ ೭.೦೯೫ ಕಿ.ಲೀ.

* ಯಡಬೆಟ್ಟದಲ್ಲಿರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಮ್ಸ್)ಯು ಬೋಧನಾ ಆಸ್ಪತ್ರೆಯಲ್ಲಿ ೭.೧೯

* ಕೊಳ್ಳೇಗಾಲದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ೧.೧೧

* ಯಳಂದೂರು ತಾಲ್ಲೂಕು ಆಸ್ಪತ್ರೆಯಲ್ಲಿ ೦.೮೫೧

* ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ೧.೧೧

* ಬೇಗೂರು ಸಮುದಾಯ ಆಸ್ಪತ್ರೆಯಲ್ಲಿ ೦.೩೭೦
———————–

ಕೊಡಗು ಜಿಲ್ಲೆಯಲ್ಲಿ ಸಿದ್ಧತೆ

* ಆಕ್ಸಿಜನ್ ೧೩ ಕಿ.ಲೀ.

* ೨೫೦ ಆಕ್ಸಿಜನ್ ಹಾಸಿಗೆ

* ೫೦ ಐಸಿಯು ಹಾಸಿಗೆ

* ೫೦ ವೆಂಟಿಲೇಟರ್

* ೪೨, ೨೧೪ ಮಂದಿ ಬೂಸ್ಟರ್ ಡೋಸ್ ಪಡೆಯಬೇಕಿದೆ


ರಾಜ್ಯ ಸರ್ಕಾರದಿಂದ ಸೂಚನೆ ಬಂದ ಕೂಡಲೇ ಕೋವಿಡ್ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರ ಇರುವ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲು ಸಿಬ್ಬಂದಿಗಳನ್ನು ಸಜ್ಜುಗೊಳಿಸಲಾಗಿದೆ. ಈಗಾಗಲೇ ಬೂಸ್ಟರ್ ಡೋಸ್ ಪಡೆದಿರುವವರಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ ಎಂದು ಮೈಸೂರು ವೈದ್ಯಕೀಯ ಮೂಲಗಳು ತಿಳಿಸಿವೆ.


ಮಂಡ್ಯದ ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಹಾಸಿಗೆಗಳು, ಆಕ್ಸಿಜನ್ ವ್ಯವಸ್ಥೆ, ಸಿಬ್ಬಂದಿ ಹಾಗೂ ಲಸಿಕೆಗೆ ಕೊರತೆ ಇಲ್ಲ. ಜಿಲ್ಲಾಸ್ಪತ್ರೆಯಲ್ಲಿ 13 ಆಕ್ಸಿಜನ್ ಘಟಕ ಹಾಗೂ ಒಂದು ವಿಶೇಷ ಆಕ್ಸಿಜನ್ ತಯಾರಿಸುವ ಘಟಕವನ್ನು ಅಣಿಗೊಳಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!