Mysore
25
overcast clouds

Social Media

ಶನಿವಾರ, 04 ಜುಲೈ 2026
Light
Dark

ಕಟ್ಟಡ ತೆರವಿಗೆ ನ್ಯಾಯಾಲಯ ತಡೆಯಾಜ್ಞೆ

ಮೈಸೂರು: ಐಬಿ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಅವರ ಹತ್ಯೆಗೆ ಕಾರಣವಾದ ಹಾಗೂ ನಿಯಮಬಾಹಿರವಾಗಿ ಕಟ್ಟಿರುವ ಕಟ್ಟಡ ನೆಲಸಮಕ್ಕೆ ನಗರದ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಸಧ್ಯಕ್ಕೆ ಮಾದಪ್ಪ ಅವರ ಕುಟುಂಬ ನಿರಾಳವಾಗಿದೆ.

ಮಾದಪ್ಪ ಅವರು ನಿಯಮಬಾಹಿರವಾಗಿ ಕಟ್ಟಡ ನಿರ್ಮಿಸಿರುವ ಸಂಬಂದ ನಗರಪಾಲಿಕೆ ನೋಟೀಸ್ ಜಾರಿಗೊಳಿಸಿತ್ತು. ನೋಟೀಸ್‌ನ ಗಡುವು ಮುಗಿದಿದ್ದ ಹಿನ್ನೆಲೆಯಲ್ಲಿ ನಗರಪಾಲಿಕೆ ಅಧಿಕಾರಿಗಳು ಮಾದಪ್ಪ ಅವರಿಗೆ ಅಂತಿಮ ನೋಟೀಸ್ ನೀಡಿದ್ದರು.

ನಿಯಮಬಾಹಿರವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸುವ ಸಂಬಂದ ನಗರಪಾಲಿಕೆಯ ಇಂಜಿನಿಯರುಗಳು ಸೋಮವಾರ ಸಂಜೆ ಕಟ್ಟಡದ ಬಳಿಗೆ ತೆರಳಿ ಕೆಡವಬೇಕಾದ ಕಟ್ಟಡದ ಒಂದು ಭಾಗವನ್ನು ಗುರುತು ಮಾಡಿದ್ದರು.

ಮಂಗಳವಾರ ಬೆಳಿಗ್ಗ ಕಾರ್ಯಾಚರಣೆ ನಡೆಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲಿ ಸೋಮವಾರ ರಾತ್ರಿಯೇ ಮಾದಪ್ಪ ಅವರ ಕುಟುಂಬದವರು ನ್ಯಾಯಾಲಯದ ತಡೆಯಾಜ್ಞೆಯನ್ನು ನಗರಪಾಲಿಕೆ ಅಧಿಕಾರಿಗಳ ಕೈಗಿಟ್ಟಿದ್ದಾರೆ. ಹೀಗಾಗಿ ಕಟ್ಟಡ ಕೆಡವುವ ಕಾರ್ಯಾಚರಣೆಯನ್ನು ನಗರಪಾಲಿಕೆ ಅಧಿಕಾರಿಗಳು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.

ಮಾದಪ್ಪ ಎಂಬುವರು ನಿಯಮ ಮೀರಿ ಕಟ್ಟಡ ನಿರ್ಮಿಸಿದ್ದರು. ಇದನ್ನು ಆಕ್ಷೇಪಿಸಿದ್ದ ಆರ್.ಎನ್.ಕುಲಕರ್ಣಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ನಿಯಮ ಉಲ್ಲಂಘನೆ ಖಚಿತವಾದ ಹಿನ್ನೆಲೆಯಲ್ಲಿ ಕಟ್ಟಡ ತೆರವು ಮಾಡುವಂತೆ ಮೈಸೂರು ಮಹಾನಗರ ಪಾಲಿಕೆ ನೋಟಿಸ್ ಜಾರಿಗೊಳಿಸಿತ್ತು.

ಇದರಿಂದ ಅಸಮಾಧಾನಗೊಂಡಿದ್ದ ಮಾದಪ್ಪ ಅವರ ಮಕ್ಕಳು ನ.೪ರಂದು ಸಂಜೆ ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿ ವಾಯುವಿಹಾರ ನಡೆಸುತ್ತಿದ್ದ ಆರ್.ಎನ್.ಕುಲಕರ್ಣಿ ಅವರಿಗೆ ಉದ್ದೇಶಪೂರ್ವಕವಾಗಿ ಕಾರಿನಿಂದ ಡಿಕ್ಕಿ ಹೊಡೆದು ಹತ್ಯೆ ಮಾಡಿದ್ದನ್ನು ಸ್ಮರಿಸಬಹುದು.

ಕಟ್ಟಡ ತೆರವಿಗಾಗಿ ನೀಡಿದ್ದ ಗಡುವು ಮುಗಿದ ಕಾರಣ ವಲಯ ಕಚೇರಿ ಅಧಿಕಾರಿಗಳು ಸೋಮವಾರವೇ ಕಟ್ಟಡ ತೆರವಿಗೆ ಸಿದ್ಧತೆ ನಡೆಸಿದ್ದರು. ಆದರೆ, ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ತಡೆಯಾಜ್ಞೆ ತೆರವುಗೊಳಿಸಿದ ನಂತರ ಕಾರ್ಯಾಚರಣೆ ನಡೆಸುತ್ತೇವೆ. -ಲಕ್ಷ್ಮಿಕಾಂತರೆಡ್ಡಿ, ನಗರಪಾಲಿಕೆ ಆಯುಕ್ತರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!