ಚಾಮರಾಜನಗರ: ಮುಖ್ಯಮಂತ್ರಿಯವರ ಚಾಮರಾಜನಗರ ಜಿಲ್ಲಾ ಭೇಟಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದ ಜಿಲ್ಲಾ ಜನತೆಗೆ ವಸತಿ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಯವರು ಮಂಗಳವಾರ ಚಾಮರಾಜನಗರ ಮತ್ತು ಹನೂರು ಪಟ್ಟಣದಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳ ಉದ್ಛಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೂ ಭೇಟಿ ನೀಡಿ ಶ್ರೀಕ್ಷೇತ್ರದ ಅಭಿವೃದ್ಧಿ ಸಂಬಂಧ ಸಭೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ನಿರೀಕ್ಷೆಗೂ ಮೀರಿ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಭಾಗವಹಿಸಿ ಬೆಂಬಲ ,ಪ್ರೀತಿ ತೋರಿಸಿದ್ದಾರೆ.
ಈ ಹಿಂದೆ ಕಂಡರಿಯದ ರೀತಿಯಲ್ಲಿ ಜನರು ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಾಮರಾಜನಗರ ಜಿಲ್ಲೆಯ ಭೇಟಿಯನ್ನು ಅವಿಸ್ಮರಣೀಯವಾಗಿಸಿದ್ದಾರೆ.
ಜಿಲ್ಲೆಯ ಜನರು ವ್ಯಕ್ತಪಡಿಸಿದ ಅತೀವ ಉತ್ಸಾಹ, ಪ್ರೀತಿ ಕಂಡು ಮುಖ್ಯಮಂತ್ರಿವರು ಜಿಲ್ಲೆಯ ಜನತೆಯ ಹೃದಯ ಶ್ರೀಮಂತಿಕೆಯ ಗುಣಗಾನ ಮಾಡಿ ಪ್ರಶಂಸಿದ್ದಾರೆ. ನೀವು ಎಷ್ಟು ಬಾರಿ ಕರೆದರೂ ಸಹ ಚಾಮರಾಜನಗರ ಜಿಲ್ಲೆಗೆ ಬರುತ್ತೇನೆ ಎಂದು ಮುಖ್ಯಮಂತ್ರಿಯವರು ಸಮಾರಂಭದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ನುಡಿದಿರುವುದಕ್ಕೆ ನಾವು ನೀವೆಲ್ಲ ಸಾಕ್ಷಿಯಾಗಿದ್ದೇವೆ.
ಕಾರ್ಯಕ್ರಮ ಯಶಸ್ವಿಯಾಗಲು ಜಿಲ್ಲಾ ಜನತೆ ಕೈಜೋಡಿಸಿದ್ದಾರೆ. ಅಲ್ಲದೆ ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್,ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಕಾರ್ಯಕ್ರಮ ಫಲಪ್ರದವಾಗಲು ಅವಿರತವಾಗಿ ಶ್ರಮಿಸಿದ್ದಾರೆ. ಜನಪ್ರತಿನಿಧಿಗಳು ಕೂಡ ಯಶಸ್ವಿಗೆ ಕಾರಣರಾಗಿದ್ದಾರೆ.
ಮುಖ್ಯಮಂತ್ರಿಯವರ ಜಿಲ್ಲಾ ಭೇಟಿಯ ಅಭಿವೃದ್ಧಿ ಕಾರ್ಯಕ್ರಮ ಯಶಸ್ವಿಗೆ ಮುಂದಾದ ಸರ್ವರಿಗೂ ಮನದಾಳದ ಕೃತಜ್ಞತೆ ಸಲ್ಲಿಸುವೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಕಂಕಣ ಬದ್ಧನಾಗಿರುವ ನನಗೆ ತಮ್ಮ ಪ್ರೀತಿ ಸಹಕಾರ ಇದೇ ರೀತಿಯಲ್ಲಿ ಮುಂದುವರೆಯಲಿ ಎಂದು ಕೋರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.