ಗುಂಡ್ಲುಪೇಟೆ: ಪಂಚ ಗ್ಯಾರಂಟಿಗಳ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಂಪೂರ್ಣವಾಗಿ ಕುಸಿದಿದೆ. ಈ ನಡುವೆ ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆಯಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹಾಗಾಗಿ ಕೇವಲ ಭರವಸೆ ನೀಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಗುಂಡ್ಲುಪೇಟೆ ತಾಲೂಕಿನ ಕಡಬೂರು ಗ್ರಾಮದ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮಗಳು ಜಾರಿಯಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಯೋಜನೆಗಳನ್ನ ತರಲು ಸರ್ಕಾರ ಎಣಗಾಡುತ್ತಿದೆ. ಡಿಸಿಎಂ ಡಿಕೆಶಿ ಹಾಗೂ ಸಚಿವ ಆರ್.ವಿ.ದೇಶಪಾಂಡೆಯವರೆ ಗ್ಯಾರಂಟಿ ಭಾರ ಆಗ್ತಿದೆ ಎಂಬ ಹೇಳಿಕೆಗಳನ್ನ ನೀಡ್ತಿರೋದು ಸರ್ಕಾರದ ವೈಫಲ್ಯತೆಯನ್ನು ತೋರಿಸುತ್ತಿದೆ ಎಂದರು.
ಡಿಕೆಶಿ ಅವರ ಹೇಳಿಕೆಯನ್ನು ನಾನು ಒಪ್ಪೋದಿಲ್ಲ. ಯಾಕಂದ್ರೆ ಆಡಳಿತ ಬಿಗಿಯಿದ್ರೆ ಗ್ಯಾರಂಟಿ ಸಹಿತವಾಗಿ ಅಭಿವೃದ್ಧಿಯನ್ನೂ ಮಾಡಬಹುದಿತ್ತು. ಆದ್ರೆ ಖಜಾನೆ ತುಂಬಿಸಲು ತೆರಿಗೆ ಹೆಚ್ಜಿಸಿರುವುದು ಇವರ ಮತ್ತೊಂದು ಸಾಧನೆ ಎಂದು ಲೇವಡಿ ಮಾಡಿದರು.
ಮತದಾರರ ಮೂಗಿಗೆ ತುಪ್ಪ ಸವರಿರುವ ಕೈ ಸರ್ಕಾರ ಫಲಾನುಭವಿಗಳ ಮೇಲೆ ತೆರಿಗೆ ಭಾರ ಹೊರಿಸಿ ದೊಡ್ಡಮಟ್ಟದ ಹಣ ಕ್ರೋಢೀಕರಣಕ್ಕೆ ಮುಂದಾಗಿದೆ ಎಂದು ಕಿಡಿಕಾರಿದರು.
ಜನರಿಂದ ಸಂಗ್ರಹವಾದ ಹಣ ಸದ್ಬಳಕೆಯಾಗಿಲ್ಲವಾದ ಪರಿಣಾಮವೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಶಿಕ್ಷಣ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿವೆ. ಇನ್ನೊಂದೆಡೆ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಎರಡೂವರೆ ಲಕ್ಷ ಖಾಲಿ ಹುದ್ದೆಗಳನ್ನ ಭರ್ತಿ ಮಾಡದೆ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ಸರ್ಕಾರದ ಕಿವಿ ಹಿಂಡಿದರು.





