Mysore
23
scattered clouds

Social Media

ಗುರುವಾರ, 30 ಏಪ್ರಿಲ 2026
Light
Dark

ಹನೂರು: ಕಾಡುಹಂದಿ ದಾಳಿ: ಮುಸುಕಿನ ಜೋಳ ನಾಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ತಾಲ್ಲೂಕಿನ ಎಂಟಿ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ ಮುಸುಕಿನ ಜೋಳವನ್ನು ಸುಮಾರು ಐವತ್ತಕ್ಕೂ ಹೆಚ್ಚು ಕಾಡು ಹಂದಿಗಳು ನಾಶ ಮಾಡಿರುವ ಘಟನೆ ಬುಧವಾರ ತಡರಾತ್ರಿ ಜರುಗಿದೆ.

ಎಂಟಿ ದೊಡ್ಡಿ ಗ್ರಾಮದ ಪುಟ್ಟಸ್ವಾಮಿರವರಿಗೆ ಸೇರಿದ ಸರ್ವೆ ನಂಬರ್ 294ರಲ್ಲಿ 1.5 ಎಕರೆಯಲ್ಲಿ ಸಮರ್ಪಕ ಮಳೆಯಾಗದಿದ್ದರೂ ಮುಸುಕಿನ ಜೋಳವನ್ನು ತಮ್ಮ ಬೋರ್‌ವೆಲ್‌ನಲ್ಲಿರುವ ನೀರನ್ನು ಬಳಸಿಕೊಂಡು ಕಷ್ಟಪಟ್ಟು ಬೆಳೆದಿದ್ದರು.

ಆದರೆ ಬುಧವಾರ ತಡರಾತ್ರಿ ಐವತ್ತಕ್ಕೂ ಹೆಚ್ಚು ಕಾಡು ಹಂದಿಗಳು ದಾಳಿ ಮಾಡಿ ಒಂದು ಎಕರೆಯಷ್ಟು ತೆನೆ ಕಚ್ಚಿದ್ದ ಜೋಳದ ಫಸಲನ್ನು ಸಂಪೂರ್ಣವಾಗಿ ನಾಶಮಾಡಿದೆ. ಇದರಿಂದ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ: ಹನೂರು ತಾಲ್ಲೂಕಿನ ಎಂಟಿ ದೊಡ್ಡಿ ಮಲ್ಲಯ್ಯನಪುರ ಗ್ರಾಮಗಳಲ್ಲಿ ಕಾಡಾನೆಗಳು, ಕಾಡು ಹಂದಿಗಳು, ಚಿರತೆ ಸೇರಿದಂತೆ ಇನ್ನಿತರ ಕಾಡುಪ್ರಾಣಿಗಳ ಹಾವಳಿ ನಿರಂತರವಾಗಿ ನಡೆಯುತ್ತಲೇ ಇದೆ. ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ರೈತರು ತಾಲ್ಲೂಕು ಕೇಂದ್ರದಲ್ಲಿ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಕಾಡುಪ್ರಾಣಿಗಳ ಹಾವಳಿಗೆ ನಿಯಂತ್ರಣ ಮಾಡುವುದಾಗಿ ಕೇವಲ ಭರವಸೆಗಳನ್ನಷ್ಟೇ ನೀಡುತ್ತಿದ್ದಾರೆ. ಇದುವರೆಗೂ ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ರೈತ ಮುಖಂಡ ಶ್ರೀನಿವಾಸ್ ಆರೋಪಿಸಿದ್ದಾರೆ.

ಸೂಕ್ತ ಪರಿಹಾರಕ್ಕೆ ಆಗ್ರಹ: ಪುಟ್ಟಸ್ವಾಮಿ ಎಂಬುವವರು ಬೆಳೆದಿದ್ದ ಒಂದು ಎಕರೆ ಮುಸುಕಿನ ಜೋಳವು ಸಂಪೂರ್ಣ ನಾಶವಾಗಿರುವುದರಿಂದ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ರೈತ ಮುಖಂಡರಾದ ಪ್ರಕಾಶ್, ಕಾಳಪ್ಪ, ರಘು, ಜಯರಾಜು, ವೆಂಕಟೇಶ್ ಒತ್ತಾಯಿಸಿದ್ದಾರೆ.

Tags:
error: Content is protected !!