ಕೊಳ್ಳೇಗಾಲ : ಬೂದಿತಿಟ್ಟು ಗ್ರಾಮದಿಂದ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್ ಹಾಗೂ ಕೊಳ್ಳೇಗಾಲದಿಂದ ಚಾ.ನಗರಕ್ಕೆ ಹೋಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಟ್ರಾಕ್ಟರ್ನಲ್ಲಿದ್ದ ಇಬ್ಬರಿಗೆ ತೀವ್ರ ಗಾಯಗಳಾಗಿರುವ ಘಟನೆ ಅಗರ-ಮಾಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಳೆಪಿಳ್ಳಾರಿ ದೇವಸ್ಥಾನದ ಬಳಿ ಭಾನುವಾರ ಮಧ್ಯರಾತ್ರಿ ನಡೆದಿದೆ.
ಉಡುಪಿ ಜಿಲ್ಲೆಯ ಕೊಂಗನಪಡಿ ಗ್ರಾಮದ ಅನಂತ ಪದ್ಮನಾಭ ಕೊಡಂಜಾಯ್ (೭೫) ಮೃತಪಟ್ಟವರು. ಅಲ್ಕೆರೆ ಅಗ್ರಹಾರ ಗ್ರಾಮದ ನಿಂಗರಾಜು ಮತ್ತು ಮಲ್ಲೇಶ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಬೂದಿತಿಟ್ಟು ಗ್ರಾಮದಿಂದ ಕಬ್ಬು ಕಟಾವು ಮಾಡಿ ಕುಂತೂರು ಸಕ್ಕರೆ ಕಾರ್ಖಾನೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಯಳಂದೂರು ಪೊಲೀಸ್ ಇನ್ಸ್ಪೆಕ್ಟರ್ ಶ್ರೀಕಾಂತ್, ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಎಸ್ಐ ಕರಿಬಸಪ್ಪ ತೆರಳಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





