Mysore
24
few clouds

Social Media

ಮಂಗಳವಾರ, 14 ಏಪ್ರಿಲ 2026
Light
Dark

ಟಿಪ್ಪರ್-ಕಾರು ನಡುವೆ ಅಪಘಾತ : ತಾಯಿ ಮಗಳು ಸ್ಥಳದಲ್ಲೇ ಸಾವು

ಗುಂಡ್ಲುಪೇಟೆ : ಕೇರಳ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್‌ಗೆ ಕಾರುವೊಂದು ಡಿಕ್ಕಿ ಹೊಡೆದು ತಾಯಿ-ಮಗಳು ಸ್ಥಳದಲ್ಲೇ ಮೃತಪಟ್ಟ ದುರಂತ ಘಟನೆ ಮಂಗಳವಾರ ನಡೆದಿದೆ.

ಪಟ್ಟಣದ ಹೊರವಲಯದ ಮಲ್ಲಯ್ಯನಪುರ ಗೇಟ್ ಬಳಿ ಕೇರಳ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆಯಲ್ಲಿ ತಾಯಿ-ಮಗಳು ಸ್ಥಳದಲ್ಲೇ ಮೃತಪಟ್ಟು, ಮಗು ಮತ್ತು ಗಂಡನಿಗೆ ತೀವ್ರ ಗಾಯಗಳಾಗಿವೆ.

ಗುಂಡ್ಲುಪೇಟೆಯಿಂದ ಕೇರಳಕ್ಕೆ ಎಂಸೆಂಡ್ ತುಂಬಿಸಿಕೊಂಡು ಹೋಗುತ್ತಿದ್ದ ಕರ್ನಾಟಕದ ಕೆಎಲ್‌47 ಎಂ 3272 ಸಂಖ್ಯೆಯ ಟಿಪ್ಪರ್, ಕೇರಳದ ಕ್ಯಾಲಿಕಟ್ ಕಡೆಯಿಂದ ಬರುತ್ತಿದ್ದ 23 ಬಿಹೆಚ್‌ 9341 ಕೆ ಸಂಖ್ಯೆಯ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ತಾಯಿ ನಿಶಾ ನೂರಿ (37) ಮತ್ತು ಅವರ ಮಗಳು ನೂಹ (18) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಡ ಮಹಮ್ಮದ್ ಅಜೀರ್ (41) ಮತ್ತು ಮಗ ನಹಿಯಾನ್ (9) ತೀವ್ರ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸ್ಥಳಾಂತರಿಸಲಾಗಿದೆ.

ಪಟ್ಟಣದಲ್ಲಿ ಟಿಪ್ಪರ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ವಿಶೇಷವಾಗಿ ಕೇರಳದ ನಂಬರ್ ಪ್ಲೇಟ್‌ಗಳ ಟಿಪ್ಪರ್‌ಗಳ ಹಾವಳಿ ಹೆಚ್ಚಾಗಿರುವುದರಿಂದ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಪುನರಾವರ್ತನೆಯಾಗುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳ ಟಿಪ್ಪರ್‌ಗಳ ಮೇಲೆ ಕಟ್ಟುನಿಟ್ಟಾದ ನಿಯಂತ್ರಣ ಹೇರಲು ಜಿಲ್ಲಾಧಿಕಾರಿ, ಆರ್‌ಟಿಒ ಮತ್ತು ಸ್ಥಳೀಯ ಶಾಸಕರು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಟಿಪ್ಪರ್ ಅನ್ನು ವಶಪಡಿಸಿಕೊಂಡಿದ್ದಾರೆ. ಮೃತದೇಹಗಳನ್ನು ಪಟ್ಟಣದ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಲಾಗಿದೆ. ಕುಟುಂಬಸ್ಥರು ಬಂದ ನಂತರ ದೂರು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Tags:
error: Content is protected !!