Mysore
25
clear sky

Social Media

ಭಾನುವಾರ, 01 ಮಾರ್ಚ್ 2026
Light
Dark

ಹನೂರು| ಗೋಪಿನಾಥಂ ಸಫಾರಿಯಲ್ಲಿ ಪ್ರವಾಸಿಗರಿಗೆ ದರ್ಶನ ಕೊಟ್ಟ ಹುಲಿರಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಹಲವು ದಿನಗಳ ನಂತರ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಗೋಪಿನಾಥಂ ಸಫಾರಿಯಲ್ಲಿ ಪ್ರವಾಸಿಗರಿಗೆ ಹುಲಿರಾಯ ದರ್ಶನ ಕೊಟ್ಟಿದ್ದು, ಪ್ರವಾಸಿಗರು ಫುಲ್ ಫಿದಾ ಆಗುವ ಮೂಲಕ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ತಾಲ್ಲೂಕಿನ ಗಡಿಯಲ್ಲಿರುವ ಕಾವೇರಿ ವನ್ಯಜೀವಿ ವಿಭಾಗದ ಗೋಪಿನಾಥಂ ವನ್ಯಜೀವಿ ವಲಯದ ನಾಮದಳ್ಳಿ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ ವೇಳೆ ಶನಿವಾರ ಸಂಜೆ ಹುಲಿ ಕಾಣಿಸಿಕೊಂಡಿದೆ.

ಕಳೆದ ಎರಡು ವರ್ಷಗಳಿಂದ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಗೋಪಿನಾಥಂನಲ್ಲಿ ಸಫಾರಿ ಪ್ರಾರಂಭವಾಗಿದ್ದು, ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಸಫಾರಿ ನಡೆಯುತ್ತಲೇ ಇದೆ.

ಆದರೆ ಸಫಾರಿ ವೇಳೆ ಹುಲಿ ಕಾಣಿಸಿಕೊಂಡಿರುವುದು ಬೆರಳಣಿಕೆಯಷ್ಟು ಮಾತ್ರ. ಇದುವರೆಗೂ ಸಫಾರಿ ವೇಳೆ ಪ್ರವಾಸಿಗರಿಗೆ ಆನೆ, ಚಿರತೆ, ಜಿಂಕೆ, ಕಾಟಿ, ಕಡವೆ ಕರಡಿ ಸೇರಿದಂತೆ ಇನ್ನಿತರ ಪ್ರಾಣಿಗಳು ಕಾಣಿಸಿಕೊಂಡಿದ್ದವು. ಕಳೆದ ವರ್ಷ ಹುಲಿ ಸಫಾರಿಗರಿಗೆ ದರ್ಶನ ನೀಡಿತ್ತು. ಆದರೆ ಹಲವು ದಿನಗಳಿಂದ ಹುಲಿ ದರ್ಶನ ನೀಡಿಲ್ಲ. ಶನಿವಾರ ಸಂಜೆ ಹುಲಿ ಕಾಣಿಸಿಕೊಂಡಿರುವುದು ಪ್ರವಾಸಿಗರಿಗೆ ತೀವ್ರ ಸಂತೋಷವನ್ನುಂಟು ಮಾಡಿದೆ.

ತಮಿಳುನಾಡು ಪ್ರವಾಸಿಗರೇ ಹೆಚ್ಚು: ಗೋಪಿನಾಥಂನಲ್ಲಿ ನಡೆಯುತ್ತಿರುವ ಸಫಾರಿಗೆ ಕರ್ನಾಟಕದ ಪ್ರವಾಸಿಗರಿಗಿಂತ ತಮಿಳುನಾಡು ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಕೃತಿಯ ಸೊಬಗನ್ನು ಸವಿಯುತ್ತಿದ್ದಾರೆ.

ಪ್ರತಿನಿತ್ಯ ಸಫಾರಿ ಇದ್ದರು ಶನಿವಾರ ಹಾಗೂ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಉಳಿದ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಆನ್‌ಲೈನ್ ಮುಖಾಂತರ ನೋಂದಣಿ ಮಾಡಿಕೊಂಡ ಪ್ರವಾಸಿಗರಿಗೆ ಸಫಾರಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಸುಮಾರು 10 ರಿಂದ 15 ಹುಲಿಗಳು ಇರುವುದಾಗಿ ತಿಳಿದು ಬಂದಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಮೀಣ್ಯಂ ಸಮೀಪ 5 ಹುಲಿಗಳು ವಿಷ ಪ್ರಶನಾದಿಂದ ಮೃತಪಟ್ಟ ನಂತರ ದಿನಗಳಲ್ಲಿ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿಯೂ ಒಂದು ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳು ಕಾಣಿಸಿಕೊಂಡಿದೆ. ಇದಲ್ಲದೆ ಕೊತ್ತನೂರು ಅರಣ್ಯ ಪ್ರದೇಶದಲ್ಲಿಯೂ ಹುಲಿ ಕಾಣಿಸಿಕೊಂಡಿದೆ. ಇದೀಗ ಹುಲಿ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು ಸಂಪೂರ್ಣ ಮುಗಿದ ನಂತರ ಎಷ್ಟು ಹುಲಿಗಳಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ ಎಂದು ಕಾವೇರಿ ವನ್ಯಜೀವಿಧಾಮದ ಡಿಸಿಎಫ್ ಸುರೇಂದ್ರ ತಿಳಿಸಿದರು.

 

 

Tags:
error: Content is protected !!