ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ವನ್ಯಧಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದ್ದು, ಕಳ್ಳಬೇಟೆ ಪ್ರಕರಣಗಳು ಜಾಸ್ತಿಯಾಗುತ್ತಿವೆ.
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳನ್ನು ಒಡೆಲೊಳಗೆ ಇರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹನೂರು ತಾಲ್ಲೂಕು ಅಪಾರ ವನ್ಯ ಸಂಪತ್ತು ಹಾಗೂ ಅಪರೂಪದ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ. ಆದರೆ ಇಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಕೊರತೆ ಹೆಚ್ಚಾಗಿದ್ದು, ಕಳ್ಳಬೇಟೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳಿಗೆ ಹೆಚ್ಚಿನ ಆತಂಕ ಶುರುವಾಗಿದೆ.
ಕಳೆದ ಮೂರು ದಶಕಗಳಿಂದಲೂ ಗಡಿಭಾಗದಲ್ಲಿ ವನ್ಯಜೀವಿಗಳ ಕಳ್ಳಬೇಟೆ ಪ್ರಕರಣಗಳು ನಡೆಯುತ್ತಲೇ ಇವೆ. ಅರಣ್ಯ ಇಲಾಖೆ ಸಿಬ್ಬಂದಿ ಕಳ್ಳಬೇಟೆಗಾರರ ಉಪಟಳ ತಪ್ಪಿಸಿ, ವನ್ಯಸಂಪತ್ತನ್ನು ಉಳಿಸಲು ಎಷ್ಟೇ ಶ್ರಮ ವಹಿಸುತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೊರತೆಯಿಂದ ಪರಿಣಾಮಕಾರಿಯಾಗಿ ಮಟ್ಟಹಾಕಲು ಇದು ಸಾಧ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ಕಳ್ಳಬೇಟೆಗಳು ಮತ್ತೆ ಜಾಸ್ತಿಯಾಗಿದ್ದು, ಅಳಿವಿಂಚಿನಲ್ಲಿರುವ ಪ್ರಾಣಿಗಳೇ ಇವರ ಟಾರ್ಗೆಟ್ ಆಗಿವೆ. ಇದರ ಜೊತೆಗೆ ಅರಣ್ಯದಂಚಿನ ಜಮೀನಿನಲ್ಲಿ ಈಗ ಬಿತ್ತನೆ ಕಾರ್ಯ ಆರಂಭವಾಗಿದೆ. ಮುಂದೆ ಫಸಲು ಸಮೃದ್ಧವಾಗಿ ಬಂದು ಇನ್ನೇನು ರೈತರ ಕೈ ಸೇರುವಷ್ಟರಲ್ಲಿ ಕಾಡು ಪ್ರಾಣಿಗಳು ಜಮೀನಿನ ಮೇಲೆ ದಾಳಿ ನಡೆಸಿ ಫಸಲನ್ನು ಸಂಪೂರ್ಣವಾಗಿ ಹಾಳು ಮಾಡುತ್ತವೆ.
ಪ್ರಾಣಿಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಆದಷ್ಟು ಬೇಗ ಎಚ್ಚೆತ್ತುಕೊಂಡು ಅರಣ್ಯ ಇಲಾಖೆ ಉಳಿವಿಗಾಗಿ ಹಾಗೂ ರೈತರ ಬೆಳೆ ಉಳಿಸಲು ಇಲಾಖೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಬೇಕೆಂದು ಪರಿಸರ ಪ್ರೇಮಿಗಳು ಹಾಗೂ ರೈತರು ಆಗ್ರಹಿಸಿದ್ದಾರೆ.





